ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ರವರ ಜನ್ಮ ದಿನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಚರಿಸಲಾಯಿತು.
ನಿವೃತ್ತ ಉಪನ್ಯಾಸಕರಾದ ಸುದರ್ಶನ್ ರವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗಾಂಧೀಜಿಯವರ ತತ್ವ ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಮಾಡಬೇಕು ಎಂದರು.
ಡಾ.ಸಹನಾ ಮಾತನಾಡಿ, ಗಾಂಧೀಜಿಯವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ವಿಷಯ ಹಾಗೂ ಗಾಂಧೀಜಿಯವರ ಸೇವೆ, ಕಾರ್ಯವನ್ನು ಸದಾ ಕಾಲ ನಿರ್ವಹಿಸಿದಾಗ ಆತ್ಮ ಸಂತೋಷ ಉಂಟಾಗುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅವರು, ಗಾಂಧೀಜಿಯ ಚಿಂತನೆ ವಿಶ್ವ ಮಾನ್ಯವಾಗಿದೆ. ಸತ್ಯ, ಅಹಿಂಸೆ, ಸತ್ಯಾಗ್ರಹ ಮತ್ತು ಅವರು ನೀಡಿದ ಸ್ವಾತಂತ್ರ್ಯ ಚಳುವಳಿಯ ಕೊಡುಗೆ ಭಾರತೀಯರು ಮರೆಯಲಾಗದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ವಕೀಲರಾದ ಮಹಾಲಿಂಗ ಗಿರಿಗಿ, ಕವಿ ಗುರುಲಿಂಗಮ್ಮ ಇತರರಿದ್ದರು.