ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ ಗ್ರಾಮಗಳಿಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

ವಿರಳ ಚರ್ಮರೋಗದಿಂದ ಬಳಲುತ್ತಿರುವವರ ಆರೋಗ್ಯ ವಿಚಾರಣೆ
ಚಾಮರಾಜನಗರ: ವಿರಳ ಚರ್ಮ ರೋಗ ಪತ್ತೆಯಾಗಿರುವ ಹನೂರು ತಾಲೂಕಿನ ಕುರಟ್ಟಿ ಹೊಸೂರು ಹಾಗೂ ಭದ್ರಯ್ಯನಹಳ್ಳಿ ಗ್ರಾಮಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಇಂದು ಭೇಟಿ ನೀಡಿ ಚರ್ಮ ರೋಗದಿಂದ ಬಳಲುತ್ತಿರುವವರ ಆರೋಗ್ಯ ವಿಚಾರಿಸಿದರು.

ಭದ್ರಯ್ಯನಹಳ್ಳಿ ಗ್ರಾಮದಲ್ಲಿ ಚರ್ಮ ರೋಗದಿಂದ ಬಳಲುತ್ತಿರುವ ಮಗುವಿನ ಮನೆಗೆ ಭೇಟಿ ನೀಡಿದ ಸಚಿವರು ಎಷ್ಟು ದಿನದಿಂದ ತೊಂದರೆ ಕಾಣಿಸಿಕೊಂಡಿದೆ. ಯಾವ ಚಿಕಿತ್ಸೆ ನೀಡಲಾಗುತ್ತಿದೆ. ಯಾವ ಬಗೆಯ ಔಷಧಗಳನ್ನು ನೀಡಲಾಗುತ್ತಿದೆ ಎಂಬ ಬಗ್ಗೆ ವಿವರವಾಗಿ ಮಾಹಿತಿ ಪಡೆದರು.

ಕುರಟ್ಟಿ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಚರ್ಮ ರೋಗದಿಂದ ನರಳುತ್ತಿರುವ ಬಾಲಕಿಯ ಮನೆಗೆ ತೆರಳಿ ಅಲ್ಲಿಯೂ ಆರೋಗ್ಯ ವಿಚಾರಿಸಿ ವಿವರ ಪಡೆದರು. ನೀಡಲಾಗುತ್ತಿರುವ ಔಷಧಗಳು, ಚಿಕಿತ್ಸೆ, ಆರೈಕÉ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಕುಟುಂಬಸ್ಥರಿಗೆ ಹೆಚ್ಚಿನ ನೆರವು, ಪರಿಹಾರ ನೀಡಬೇಕೆಂದು ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಚಿಕಿತ್ಸೆ, ಔಷಧಗಳನ್ನು ಅಗತ್ಯಕ್ಕೆ ಅನುಗುಣವಾಗಿ ನೀಡಲಾಗುವುದು. ಪರಿಹಾರ ಕೊಡಿಸುವ ನಿಟ್ಟಿನಲ್ಲಿಯೂ ಅಗತ್ಯಕ್ರಮ ವಹಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಪಿಂಚಣಿ ನೀಡುವ ಆದೇಶ ಪತ್ರವನ್ನು ಸಚಿವರು ಪೋಷಕರಿಗೆ ವಿತರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹನೂರು ತಾಲೂಕಿನ ಎರಡರಿಂದ ಮೂರು ಗ್ರಾಮಗಳಲ್ಲಿ ವಿರಳ ಚರ್ಮರೋಗ ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡಲಾಗಿತ್ತು. ತಾವೂ ಸಹ ಈ ಬಗ್ಗೆ ಸಂಪೂರ್ಣವಾಗಿ ವಿವರ ಪಡೆದುಕೊಂಡಿದ್ದೇನೆ. ಅಪರೂಪದ ಈ ರೋಗ ಇತರೆ ಜಿಲ್ಲೆಯ ಕೆಲವೆಡೆ ಕಂಡು ಬಂದಿರುವ ಮಾಹಿತಿ ಇದೆ. ಇದರ ನಿಯಂತ್ರಣ ಹಾಗೂ ನಿರ್ಮೂಲನೆಗೆ ವಿಶೇಷ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ರೋಗ ಬಾಧಿತರಿಗೆ ಔಷಧ, ಪೌಷ್ಠಿಕಾಂಶ ಆಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ವಿರಳ ಚರ್ಮ ರೋಗ ಕಾಣಿಸಿಕೊಂಡಿರುವುದು ಕುಟುಂಬಕ್ಕೆ ನೋವಿನ ಸಂಗತಿಯಾಗಿದೆ. ಸಂಕಷ್ಟದಿಂದ ಬಳಲುತ್ತಿರುವ ಕುಟುಂಬಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ತೆರಳಿದ ನಂತರ ಚರ್ಚಿಸಿ ಸಹಾನುಭೂತಿಯಿಂದ ನೆರವು ನೀಡುವ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಗಂಭೀರವಾಗಿರುವ ಈ ಚರ್ಮ ರೋಗ ಬರದಂತೆ ತಡೆಯಲು ಅನುಸರಿಸಬೇಕಿರುವ ವಿಧಾನ ಹಾಗೂ ಪರೀಕ್ಷೆಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಗರ್ಭಾವಸ್ಥೆಯಲ್ಲಿಯೇ ರೋಗ ಪತ್ತೆಗೆ ಅವಕಾಶವಿದೆ. ಅಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ವೈದ್ಯಕೀಯ ಕ್ರಮಗಳ ಬಗ್ಗೆಯೂ ತಿಳಿಸಲಾಗುತ್ತಿದೆ. ರೋಗ ಕಂಡು ಬಂದಿರುವ ಪ್ರದೇಶ ಹಾಗೂ ಕುಟುಂಬಗಳಲ್ಲಿ ವಿಶೇಷವಾಗಿ ಮದುವೆ ವಯಸ್ಸಿನ ಗಂಡು ಹಾಗೂ ಹೆಣ್ಣು ಮಕ್ಕಳಲ್ಲಿ ಪರೀಕ್ಷೆ ನಡೆಸಿ ರೋಗ ಬರದಂತೆ ತಡೆಯುವ ಕ್ರಮÀಗಳಿಗೂ ಮುಂದಾಗಲಿದ್ದೇವೆ ಎಂದÀರು.

ಬಳಿಕ ಕೊಳ್ಳೇಗಾಲ ಪ್ರವಾಸಿಮಂದಿರದಲ್ಲಿ ಸಿಕಲ್ ಸೆಲ್ ಅನಿಮಿಯಾ ರೋಗದಿಂದ ಬಳಲುತ್ತಿರುವವರು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಸಚಿವರು ಆರೋಗ್ಯ ವಿಚಾರಿಸಿದರು.

ಶಾಸಕರಾದ ಎಂ.ಆರ್. ಮಂಜುನಾಥ್, ಮಾಜಿ ಶಾಸಕರಾದ ಆರ್. ನರೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತರಾದ ರಂದೀಪ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ್, ತಹಶೀಲ್ದಾರ್ ಗುರುಪ್ರಸಾದ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಆರ್. ಉಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ಡಾ. ಗೋಪಾಲ್, ಇತರರು ಇದ್ದರು.

Leave a Reply

Your email address will not be published. Required fields are marked *