ಖಾಸಗಿ ಡೇರಿಗಳ ವ್ಯಾಮೋಹ ಬಿಡಿ: ಒಕ್ಕೂಟದ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಿ : ಎಚ್.ಎಸ್. ಬಸವರಾಜು

ಚಾಮರಾಜನಗರ: ಅಲ್ಪ ಹಣದ ಆಸೆಗಾಗಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಸರಬರಾಜು ಮಾಡುವುದನ್ನು ನಿಲ್ಲಿಸಬೇಡಿ. ಸಹಕಾರ ಸಂಘಗಳ ಮೂಲಕ ರೈತರ ಬಲವರ್ಧನೆಗಾಗಿ ಸರ್ಕಾರ ಮತ್ತು ಒಕ್ಕೂಟ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.

ತಾಲೂಕಿನ ಕಲ್ಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಡಿ ಪ್ರದೇಶವಾಗಿರುವ ಕಾರಣದಿಂದ ನಮ್ಮ ಭಾಗದಲ್ಲಿ ಕೇರಳ ಮತ್ತು ತಮಿಳುನಾಡು ಭಾಗದ ಖಾಸಗಿ ಡೇರಿಗಳು ರೈತರಿಂದ ಹಾಲು ಖರೀದಿಸಲು ಮುಂದಾಗಿದ್ದಾರೆ. ಇವರಿಗೆ ಪ್ರೋತ್ಸಾಹ ನೀಡಿದರೆ, ನಮ್ಮ ಗ್ರಾಮದ ಡೇರಿಗಳ ಬೆಳವಣಿಗೆಯನ್ನು ನಾವುಗಳೇ ಕುಂಠಿತ ಮಾಡಿದಂತಾಗುತ್ತದೆ. ಹೀಗಾಗಿ ರೈತರು ಎಚ್ಚೆತ್ತುಕೊಂಡು ಗ್ರಾಮಗಳಲ್ಲಿರುವ ರೈತರ ಸಂಸ್ಥೆಯಾಗಿರುವ ನಂದಿನಿ ಡೇರಿಗಳಿಗೆ ಗುಣಮಟ್ಟದ ಹಾಲು ಪೊರೈಕೆ ಮಾಡಬೇಕು ಎಂದರು.

ರೈತರ ರಾಸುಗಳಿಗೆ ವಿಮೆ ಸೌಲಭ್ಯಕ್ಕಾಗಿ ಪ್ರತಿ ವರ್ಷ ಒಕ್ಕೂಟ ಶೇ. ೫೦ರಷ್ಟು ಹಣವನ್ನು ನೀಡಿ, ವಿಮೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಗುಣಮಟ್ಟದ ಹಾಲಿಗೆ ಹೆಚ್ಚಿನ ದರ, ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ, ಅಕಸ್ಮಿಕ ಮರಣ ಹೊಂದಿರೆ, ೧೫ ಸಾವಿರ ರು. ಪರಿಹಾರ ಹಾಗೂ ರೈತ ವಿಮೆಯಿಂದ ಒಂದು ಲಕ್ಷ ರೂ. ಪರಿಹಾರ ನೀಡಿದ್ದೇವೆ. ಅಲ್ಲದೇ, ಪ್ರತಿ ವರ್ಷ ಲಾಭದಲ್ಲಿ ಬೋನಸ್ ವಿತರಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನಿಮ್ಮ ಕೈಯಲ್ಲಿಯೇ ಆಡಳಿತ ಇರುತ್ತದೆ ಎಂಬುದನ್ನು ಸದಸ್ಯರು ಗಮನಿಸಬೇಕು. ಅಲ್ಲದೇ ಕಲ್ಪುರ ಬಿಎಂಸಿ ಕೇಂದ್ರವು ಅತ್ಯುತ್ತಮ ಬಿಎಂಸಿ ಕೇಂದ್ರ ಎಂದು ಈ ಬಾರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಬಸವರಾಜು ತಿಳಿಸಿದರು.

ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಅಮರ್ ಎನ್. ಗುಣಮಟ್ಟದ ಹಾಲು ಪೊರೈಕೆಯಿಂದ ಸಂಘ ಅಭಿವೃದ್ದಿ ಯಾಗುತ್ತದೆ. ಡೇರಿಗೆ ಗುಣಮಟ್ಟದ ಹಾಲು ಪೊರೈಕೆಯಿಂದ ಹಾಲಿನ ಮಾರಾಟದ ಜೊತೆಗೆ ಉಪ ಉತ್ಪನ್ನಗಳನ್ನು ತಯಾರು ಮಾಡಲು ಸಹಕಾರಿಯಾಗುತ್ತದೆ. ಅಲ್ಲದೇ ನಿಮ್ಮಿಂದ ಖರೀದಿಸಿದ ಹಾಲನ್ನು ನೇರವಾಗಿ ಹೊರರಾಜ್ಯಗಳಿಗೆ ಕಳುಹಿಸುವುದರಿಂದ ಗುಣಮಟ್ಟದಕ್ಕೆ ಹೆಚ್ಚಿನ ಅದ್ಯತೆ ನೀಡಬೇಕಾಗಿದೆ. ಇದರಿಂದ ಡೇರಿ ಹಾಗೂ ಒಕ್ಕೂಟದ ಬೆಳವಣಿಗೆ ನೀವು ನೀಡುವ ಗುಣಮಟ್ಟದ ಹಾಲಿನಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ನಾಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಡೇರಿ ಗುಣಮಟ್ಟದ ಹಾಲು ಶೇಖರಣೆ ಮಾಡಿದ ಪರಿಣಾಮ ೪.೩೫ ಲಕ್ಷ ರೂ.ಗಳ ನಿವ್ವಳ ಲಾಭ ಪಡೆದುಕೊಂಡಿದ್ದು, ೨.೦೨ ಲಕ್ಷ ರೂ.ಗಳ ಬೋನಸ್ ಅನ್ನು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಸ್ವಾಮಿ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಹದೇವಶೆಟ್ಟಿ, ಚಾಮುಲ್ ವಿಸ್ತಾರಣಾಧಿಕಾರಿ ನಾಗೇಶ್, ನಿರ್ದೇಶಕರಾದ ಬಸವಣ್ಣ, ಗುರುಸ್ವಾಮಪ್ಪ, ಬಿ.ಚಿನ್ನಸ್ವಾಮಿ, ಮಹದೇವಪ್ಪ, ನಾಗೇಶ್, ಅಂಕಪ್ಪ, ಮರಿಸ್ವಾಮಿ, ಕಮಲಮ್ಮ, ನಾಗಮ್ಮ, ನೌಕರರಾದ ಕೆಂಪಣ್ಣ, ಕೆ.ಎನ್. ಶಿವಸ್ವಾಮಿ, ಕೆ. ಲೋಕೇಶ್, ಉಮೇಶ್ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *