ತಪ್ಪಿಸಿಕೊಂಡಿದ್ದ ಕೈದಿ ಮತ್ತೆ ಕಳ್ಳತನ ಮಾಡುವಾಗ ಸಿಕ್ಕಾಕ್ಕೊಂಡ

ಚಾಮರಾಜನಗರ: ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೈದಿಯೋರ್ವ ಮತ್ತೆ ಕಳ್ಳತನ ಮಾಡಲು ಹೋಗಿ ಖಾಕಿ ಬಲೆಗೆ ಬಿದ್ದಿರುವ ಘಟನೆ ಚಾಮರಾಜಗರದ ಕೌವಲಂದೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಸುರೇಶ್(೩೦) ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಾರಣಾ ಕೈದಿಯಾಗಿದ್ದು, ತಪ್ಪಿಸಿಕೊಂಡ ೨೪ ತಾಸಲ್ಲೇ ಮತ್ತೇ ಖಾಕಿ ಬಲೆಗೆ ಬಿದ್ದಿದ್ದಾನೆ.

ಕೆಲ ದಿನಗಳ ಹಿಂದೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸುರೇಶ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಹಲವಾರು ಕಳ್ಳತನದ ಆರೋಪ ಹೊತ್ತಿದ್ದ ಕೈದಿಯನ್ನು ತಮಿಳುನಾಡಿನ ಸತ್ಯಮಂಗಲಂನ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ತಪ್ಪಿಸಿಕೊಂಡಿದ್ದನು.

ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು: ಕೈಗೆ ಹಾಕಲಾಗಿದ್ದ ಬೇಡಿಯನ್ನು ಕಲ್ಲಿನಿಂದ ಜಜ್ಜಿಕೊಂಡು ಬೇಡಿ ಕಳಚಿಕೊಂಡು, ಹಾಕಿದ್ದ ಬಿಳಿ ಬಟ್ಟೆಯನ್ನು ಕಳಚಿ ಇತರರನ್ನು ಕಾಡಿ ಬೇಡಿ ಚಾಮರಾಜನಗರಕ್ಕೆ ಬಂದಿದ್ದ ಎನ್ನಲಾಗಿದೆ. ಚಾಮರಾಜನಗರದಿಂದ ನಂಜನಗೂಡಿಗೆ ನಿನ್ನೆ ರಾತ್ರಿ ರೈಲಿನಲ್ಲಿ ಹೋಗಿದ್ದ ಈತ, ಇಂದು ನಂಜನಗೂಡಿನಿಂದ ವಾಪಸ್ ಚಾಮರಾಜನಗರಕ್ಕೆ ಬರುವಾಗ ಮಹಿಳಾ ಬೋಗಿಯನ್ನು ಏರಿ ಪರ್ಸ್ ಕದಿಯಲು ಯತ್ನಿಸಿದಾಗ ಅಲ್ಲೇ ಇದ್ದ ಸಹ ಪ್ರಯಾಣಿಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಪತ್ತೆಯಾಗಿದ್ದ ಕೈದಿಯ ಪ್ರಕರಣ ಸುಖಾಂತ್ಯಗೊಂಡಿದ್ದು, ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಈತನ ಆರೋಗ್ಯ ತಪಾಸಣೆ ಮಾಡಿಸಿ ಸತ್ಯಮಂಗಲಂ ನ್ಯಾಯಾಲಯ ವಶಕ್ಕೆ ಕೊಡಲು ತೆರಳಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *