ಚಾಮರಾಜನಗರ: ಅನ್ನಭಾಗ್ಯ ಯೋಜನೆಡಿ ೫ ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ನಗದು ಹಣವನ್ನು ಡಿಬಿಟಿ ಮುಖಾಂತರ ಪಾವತಿಯಾಗದ ಪಡಿತರ ಚೀಟಿದಾರರು ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತೆರಳಿ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಂಡಲ್ಲಿ ಆಗಸ್ಟ್ ಮಾಹೆಯ ಡಿಬಿಟಿ ಹಣ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.
ಅನ್ನಭಾಗ್ಯ ಯೋಜನೆಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಡಿಬಿಟಿ ಮುಖಾಂತರ ಹಣ ಜಮಾವಣೆಯಾಗದ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ತೆರಳಿ ಮಾಹಿತಿ ಪಡೆದುಕೊಂಡು ಕೂಡಲೇ ಬ್ಯಾಂಕ್ ಶಾಖೆಗೆ ತೆರಳಿ ಆಧಾರ್ ನಂಬರ್ ನೀಡಿ ಬ್ಯಾಂಕ್ ಖಾತೆಯನ್ನು ಸಕ್ರಿಯ ಮಾಡಿಕೊಳ್ಳಬೇಕು. ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಂಡ ನಂತರ ಮತ್ತೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಮಾಹಿತಿ ನೀಡಬೇಕು.
ಯಾವುದೇ ಪಡಿತರ ಚೀಟಿದಾರ ಕುಟುಂಬದ ಮುಖ್ಯಸ್ಥರ ಮಹಿಳೆಯಾಗಿದ್ದು, ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ದರೆ, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಜೋಡಣೆಯಾಗಿಲ್ಲದಿದ್ದರೆ, ಆಧಾರ್ ನಂಬರ್ ತಪ್ಪಾಗಿ ಬ್ಯಾಂಕ್ ಖಾತೆಗೆ ಜೋಡಣೆಯಾಗಿದ್ದರೆ, ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಹಣ ಜಮೆ ಮಾಡಲು ಸಾಧ್ಯವಾಗಿರುವುದಿಲ್ಲ. ಇಂತಹ ಪಡಿತರ ಚೀಟಿದಾರರ ವಿವರವನ್ನು ನ್ಯಾಯಬೆಲೆ ಅಂಗಡಿವಾರು, ರೇಷನ್ಕಾರ್ಡ್ ನಂಬರ್ವಾರು ಪಟ್ಟಿಯನ್ನು ನ್ಯಾಯಬೆಲೆ ಅಂಗಡಿ ವಿತರಕರಿಗೆ ಈಗಾಗಲೇ ನೀಡಲಾಗಿದೆ. ನ್ಯಾಯಬೆಲೆ ಅಂಗಡಿ ಮುಂದೆ ಈ ಪಟ್ಟಿಗಳನ್ನು ಪ್ರದರ್ಶಿಸಲು ಹಾಗೂ ಈ ಬ್ಯಾಂಕ್ ಖಾತೆ ತಪ್ಪಾಗಿರುವ ಬಗ್ಗೆ ಪಡಿತರ ಚೀಟಿದಾರರಿಗೆ ತಿಳುವಳಿಕೆ ಮೂಡಿಸಲು ನ್ಯಾಯಬೆಲೆ ಅಂಗಡಿ ವಿತರಕರಿಗೆ ತಿಳಿಸಲಾಗಿದೆ.
ಪಡಿತರ ಪಡಿತರ ಚೀಟಿದಾರ ಸದಸ್ಯರು ಮರಣ ಹೊಂದಿದ ವ್ಯಕ್ತಿಯ ಹೆಸರನ್ನು ತೆಗೆಯಲು ಹಾಗೂ ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡಲು ಅಥವಾ ಕುಟುಂಬದ ಮುಖ್ಯಸ್ಥರನ್ನು ಬದಲಾಯಿಸಲು ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮೂಲಕ ಸರಿಪಡಿಸಿಕೊಳ್ಳಲು ಹಾಗೂ ಈ ಕಾರ್ಯವನ್ನು ಉಚಿತವಾಗಿ ಮಾಡುವಂತೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಸೂಚಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
