ಪಡಿತರ ಚೀಟಿದಾರರಿಗೆ ನಗದು ವರ್ಗಾವಣೆ : ದಾಖಲಾತಿ ಅಪ್ ಡೇಟ್ ಮಾಡಿಸಿಕೊಳ್ಳಲು ಮನವಿ

ಚಾಮರಾಜನಗರ: ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ೫ ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ೩೪ ರೂ. ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರ ಮುಖ್ಯಸ್ಥರು ಎಲ್ಲಾ ದಾಖಲಾತಿಗಳನ್ನು ಅಪ್ ಡೇಟ್ ಮಾಡಿಕೊಳ್ಳುವಂತೆ ಆಹಾರ ಇಲಾಖೆ ತಿಳಿಸಿದೆ.

ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರದಿದ್ದರೆ, ಬ್ಯಾಂಕ್ ಖಾತೆಯ ಮಾಹಿತಿಯು ಇದುವರೆಗೆ ಲಭ್ಯವಿಲ್ಲದಿದ್ದಲ್ಲಿ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದ ನಂತರ, ನಿಷ್ಕ್ರಿಯ ಬ್ಯಾಂಕ್ ಖಾತೆಯನ್ನು ಪುನರ್ಜೀವಗೊಳಿಸಿದ ನಂತರ ಅಂತಹ ಪಡಿತರ ಚೀಟಿ ಕುಟುಂಬದ ಮುಖ್ಯಸ್ಥರ ಖಾತೆಗೆ ನಗದನ್ನು ವರ್ಗಾವಣೆ ಮಾಡಲಾಗುವುದು.

ಈಗಾಗಲೇ ಬ್ಯಾಂಕ್ ಖಾತೆ ಹೊಂದಿರುವವರು ಚಾಲ್ತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು ೩೫ ಕೆ.ಜಿ ಆಹಾರ ಧ್ಯಾನವನ್ನು ಪಡೆಯುತ್ತಿರುವುದರಿಂದ ಅಂತಹ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬಗಳಿಗೆ ನಗದು ವರ್ಗಾವಣೆಯ ಸೌಲಭ್ಯ ನೀಡಲಾಗುವುದಿಲ್ಲ. ಆದರೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯ ಕುಟುಂಬದಲ್ಲಿ ೪ ಸದಸ್ಯರಿದ್ದರೆ ಸದರಿ ಕುಟುಂಬವು ೧೭೦ ರೂ. (೩೪೧) ಗಳನ್ನು, ೫ ಸದಸ್ಯರನ್ನು ಹೊಂದಿರುವ ಕುಟುಂಬವು ೫೧೦ ರೂ. (೩೪೩) ಗಳನ್ನು, ೬ ಸದಸ್ಯರನ್ನು ಹೊಂದಿರುವ ಕುಟುಂಬವು ೮೫೦ ರೂ. (೩೪೫) ಗಳನ್ನು ಪಡೆಯಲಿದೆ. ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತವು ಮುಂದುವರೆಯಲಿದೆ.

ಬಯೋಮೆಟ್ರಿಕ್ ಪರಿಶೀಲನೆಯ ಬದಲಾಗಿ ಮೊಬೈಲ್ ಓಟಿಪಿ ಮುಖಾಂತರ ಆಹಾರ ಧಾನ್ಯವನ್ನು ಪಡೆಯುವ ವ್ಯವಸ್ಥೆಯ ಬಳಕೆಯನ್ನು ಕ್ರಮೇಣ ಕಡಿಮೆಗೊಳಿಸುವುದು ಹಾಗೂ ಈ ವ್ಯವಸ್ಥೆಯನ್ನು ಮುಂದಿನ ಎರಡು ತಿಂಗಳೊಳಗಾಗಿ ಸ್ಥಗಿತಗೊಳಿಸಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು ೩೫೭೮೨ ಎಎವೈ ಪಡಿತರ ಚೀಟಿಗಳಿದ್ದು, ೧೩೬೭೨೪ ಪಡಿತರ ಚೀಟಿಯ ಸದಸ್ಯರಿದ್ದಾರೆ. ಒಟ್ಟು ೨೫೪೫೮೫ ಆದ್ಯತಾ ಪಡಿತರ ಚೀಟಿಗಳಿದ್ದು, ೭೫೦೪೯೮ ಪಡಿತರ ಚೀಟಿಯ ಸದಸ್ಯರಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ ೧೨೧೦೬ ಎಎವೈ ಪಡಿತರ ಚೀಟಿಗಳಿದ್ದು, ೪೭೩೩೪ ಪಡಿತರ ಚೀಟಿಯ ಸದಸ್ಯರಿದ್ದಾರೆ. ೮೯೦೫೮ ಆದ್ಯತಾ ಪಡಿತರ ಚೀಟಿಗಳಿದ್ದು, ೨೬೨೫೦೦ ಪಡಿತರ ಚೀಟಿಯ ಸದಸ್ಯರಿದ್ದಾರೆ. ಗುಂಡ್ಲುಪೇಟೆ ತಾಲೂಕಿನಲ್ಲಿ ೮೪೩೧ ಎಎವೈ ಪಡಿತರ ಚೀಟಿಗಳಿದ್ದು, ೩೩೪೧೧ ಪಡಿತರ ಚೀಟಿಯ ಸದಸ್ಯರಿದ್ದಾರೆ. ೫೬೪೦೪ ಆದ್ಯತಾ ಪಡಿತರ ಚೀಟಿಗಳಿದ್ದು, ೧೬೨೯೩೫ ಪಡಿತರ ಚೀಟಿಯ ಸದಸ್ಯರಿದ್ದಾರೆ. ಕೊಳ್ಳೇಗಾಲ ತಾಲೂಕಿನಲ್ಲಿ ೫೦೮೩ ಎಎವೈ ಪಡಿತರ ಚೀಟಿಗಳಿದ್ದು, ೨೦೩೧೩ ಪಡಿತರ ಚೀಟಿಯ ಸದಸ್ಯರಿದ್ದಾರೆ. ೪೩೯೧೬ ಆದ್ಯತಾ ಪಡಿತರ ಚೀಟಿಗಳಿದ್ದು, ೧೩೩೧೬೭ ಪಡಿತರ ಚೀಟಿಯ ಸದಸ್ಯರಿದ್ದಾರೆ. ಯಳಂದೂರು ತಾಲೂಕಿನಲ್ಲಿ ೨೭೧೯ ಎಎವೈ ಪಡಿತರ ಚೀಟಿಗಳಿದ್ದು, ೯೩೪೯ ಪಡಿತರ ಚೀಟಿಯ ಸದಸ್ಯರಿದ್ದಾರೆ. ೨೦೮೬೬ ಆದ್ಯತಾ ಪಡಿತರ ಚೀಟಿಗಳಿದ್ದು, ೬೩೦೮೯ ಪಡಿತರ ಚೀಟಿಯ ಸದಸ್ಯರಿದ್ದಾರೆ. ಹನೂರು ತಾಲೂಕಿನಲ್ಲಿ ೭೪೪೩ ಎಎವೈ ಪಡಿತರ ಚೀಟಿಗಳಿದ್ದು, ೨೬೩೧೭ ಪಡಿತರ ಚೀಟಿಯ ಸದಸ್ಯರಿದ್ದಾರೆ. ೪೪೩೪೪ ಆದ್ಯತಾ ಪಡಿತರ ಚೀಟಿಗಳಿದ್ದು, ೧೨೮೮೦೭ ಪಡಿತರ ಚೀಟಿಯ ಸದಸ್ಯರಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *