ಪತ್ರಕರ್ತರಿಗೆ ಕಾನೂನು ಅರಿವು ಅಗತ್ಯ

ಚಾಮರಾಜನಗರ: ಪತ್ರಕರ್ತರಿಗೆ ಕಾನೂನಿನ ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರಿಗೆ ಕಾನೂನಿನ ವಿಚಾರ ತಿಳಿದಿರುತ್ತದೆ. ಕಾನೂನಿನ ಬಗ್ಗೆ ಎಷ್ಟೇ ತಿಳಿವಳಿಕೆ ಇದ್ದರೂ ಹೊಸ ಹೊಸ ಕಾನೂನುಗಳು ಬರುತ್ತವೆ. ಅವುಗಳ ಬಗ್ಗೆ ಅರಿವಿದ್ದರೆ ಸುದ್ದಿಗಳನ್ನು ಮಾಡುವಾಗ ಎಚ್ಚರಿಕೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಪತ್ರಕರ್ತರು ಇಂತಹ ಕಾರ್ಯಾಗಾರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.

ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ನಿಶಾರಾಣಿ ಅವರು ಮಾತನಾಡಿ ಪೋಕ್ಸೋ ಕಾಯ್ದೆ ಸಂಬಂಧ ಪ್ರಕರಣದಲ್ಲಿ ಶಿಕ್ಷೆ ಘೋಷಣೆಯಾದಾಗ ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸಬಾರದು. ಶಿಕ್ಷೆ, ಪ್ರಮಾಣ ಬರೆದರೆ ಅನುಕೂಲ. ಶಿಕ್ಷೆ ಸಂಬಂಧ ಜನರಿಗೆ ಅರಿವು ಮೂಡಿಸುವ ವಿಚಾರ ಬರೆದರೆ ಉತ್ತಮ. ಬಾಲ್ಯವಿವಾಹ ನಿಷೇಧ ಕಾಯ್ದೆ ಸಂಬಂಧ ಸುದ್ದಿ ಹೆಚ್ಚು ಬಂದಲ್ಲಿ ಜನರಲ್ಲಿ ಜಾಗೃತಿ ಉಂಟಾಗಲು ಸಹಾಯಕವಾಗಲಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಪ್ರಮುಖ ಅಂಗ ಎನಿಸಿಕೊಂಡಿರುವ ಪತ್ರಿಕಾ ರಂಗ ಸಮಾಜದ ಧ್ವನಿಯಾಗಿದೆ. ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಆದರೆ ಮತ್ತೊಬ್ಬರ ಸ್ವಾತಂತ್ರ್ಯಹರಣವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಕಾಯ್ದೆಗಳ ಬಗ್ಗೆ ಹೆಚ್ಚು ಅರಿವು ಹೊಂದಬೇಕಿದೆ ಎಂದು ತಿಳಿಸಿದರು.

ಮುಖ್ಯ ಉಪನ್ಯಾಸ ನೀಡಿದ ಪ್ರಜಾವಾಣಿ ಪತ್ರಿಕೆಯ ಮೈಸೂರು ಬ್ಯೂರೋ ಮುಖ್ಯಸ್ಥರಾದ ಕೆ. ನರಸಿಂಹಮೂರ್ತಿ ಅವರು ಮಾತನಾಡಿ ಪತ್ರಕರ್ತರು ನೈತಿಕ ಜವಬ್ದಾರಿ ಅರಿತು ಕೆಲಸ ಮಾಡಬೇಕು. ಸುದ್ದಿಯ ಆಯಸ್ಸು ಕಡಿಮೆ. ಸರಿಯಾದ ಹಾಗೂ ನೈಜ ಸುದ್ದಿಗಳನ್ನು ಕೊಡುವುದು ಪತ್ರಕರ್ತರ ಮಹತ್ತರ ಜವಬ್ದಾರಿಯಾಗಿದೆ. ಪತ್ರಕರ್ತರಿಗೆ ಬರವಣಿಗೆ, ವಿಷಯ ಜ್ಞಾನ ಇರಬೇಕು. ತಾವು ಮಾಡುವ ವರದಿಗೆ ಉತ್ತರದಾಯಿತ್ವ, ಜವಬ್ದಾರಿಯಾಗಿರಬೇಕು ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ ಪತ್ರಕರ್ತರಿಗೆ ಬರವಣಿಗೆ ಶಕ್ತಿ ಜೊತೆಗೆ ಸಮಾಜದ ಆಗುಹೋಗುಗಳ ಅರಿವು ಇರಬೇಕು. ಸಮಾಜ ನಿಷ್ಪಕ್ಷಪಾತ ಸುದ್ದಿಗಳನ್ನ ನಿರೀಕ್ಷೆ ಮಾಡುತ್ತದೆ. ಪತ್ರಕರ್ತರಿಗೆ ಹೆಚ್ಚಿನ ಕಾನೂನು ಅರಿವು ನೀಡುವ ಸಲುವಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಹಿರಿಯ ವಕೀಲರಾದ ರವಿ ಅವರು ಪತ್ರಿಕಾ ಸಂಬಂಧ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ ರಮೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *