ಚಾಮರಾಜನಗರ: ಕರ್ನಾಟಕ ಬಂದ್ ಬೆಂಬಲಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಬೈಕ್, ಆಟೋ ರ್ಯಾಲಿ ನಡೆಸಲಾಯಿತು.
ನಗರದ ಸಂಪಿಗೆ ರಸ್ತೆಯಲ್ಲಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದರಾಜು ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಅಲ್ಲಿಂದ ಬೈಕ್, ಆಟೋ ರ್ಯಾಲಿ ಹೊರಟು ಚಿಕ್ಕಂಗಡಿ, ದೊಡ್ಡಂಗಡಿ ಬೀದಿ ಸತ್ತಿರಸ್ತೆ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿದರು.

ನಂತರ ಡಿವಿಯೇಷನ್ ರಸ್ತೆ ಮೂಲಕ ಸಂತೇಮರಹಳ್ಳಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ, ಕೇಂದ್ರ ಸರ್ಕಾರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಸಿದ್ದರಾಜು ಮಾತನಾಡಿ, ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟದ ಕ್ಷೀಣಿಸುತ್ತಿದ್ದು, ರಾಜ್ಯದಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಲಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸರಿಪಡಿಸಬೇಕು. ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾನವ ಹಕ್ಕು ಆಯೋಗದ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ್, ವೇದಿಕೆ ಟೌನ್ ಅಧ್ಯಕ್ಷ ಆನಂದ್, ಗೌರವ ಅಧ್ಯಕ್ಷ ಮಸಣಶೆಟ್ಟಿ, ಕಾರ್ಯದರ್ಶಿ ನಾಗಣ್ಣಶೆಟ್ಟಿ, ಸಂಚಾಲಕರಾದ ಚನ್ನಿಗಶೆಟ್ಟಿ, ಗೋವಿಂದರಾಜು, ಯುವ ಸಾಮ್ರಾಜ್ಯ ಉಪಾಧ್ಯಕ್ಷ ಅಭಿ, ವೆಂಕಿ, ಪ್ರಸಾದ್, ಭರತ್, ಆಟೋ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಗೂಡ್ಸ್ ಆಟೋ ಸಂಘ ಅಧ್ಯಕ್ಷ ಮಹೇಶ್, ಸಿದ್ದರಾಜು ಜಿಮ್ ಶಂಕರ್, ಲಿಂಗರಾಜು ಪದಾಧಿಕಾರಿಗಳು ಭಾಗವಹಿಸಿದ್ದರು.