ಭಾರತದ ಪ್ರಥಮ ಸ್ವಾತಂತ್ರ ಹೋರಾಟದ ಹುತಾತ್ಮ ಮಂಗಲ ಪಾಂಡೆ

ಚಾಮರಾಜನಗರ: ಭಾರತದ ಪ್ರಥಮ ಸ್ವಾತಂತ್ರ ಹೋರಾಟದ ಹುತಾತ್ಮ ಮಂಗಲ ಪಾಂಡೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಋಗ್ವೇದಿ ಯೂತ್ ಕ್ಲಬ್ ಮತ್ತು ಜೈ ಹಿಂದ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಿಡಿ ಮಂಗಲ ಪಾಂಡೆ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಇಡೀ ದೇಶ ತಿರುಗಿ ಬೀಳುವಂತೆ ಮಾಡಿದ ವೀರ ಯೋಧ. ಸೋದರರೇ ಎದ್ದೇಳಿ. ಹಿಂದೆ ಬೀಳುವ ಸಮಯ ಇದಲ್ಲ. ಬನ್ನಿ ಕೈಜೋಡಿಸಿ. ಸ್ವಾತಂತ್ರ ಲಕ್ಷ್ಮಿ ನಿಮ್ಮನ್ನು ಆಹ್ವಾನಿಸುತ್ತಿದ್ದಾಳೆ ಎಂದು ಸಿಪಾಯಿಗಳಲ್ಲಿ ಸ್ಪೂರ್ತಿ ತುಂಬಿದ ಹುತಾತ್ಮ ಮಂಗಲ ಪಾಂಡೆ ಎಂದು ಅವರನ್ನು ಬಣ್ಣಿಸಿದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ೩೪ನೇ ಪದಾತಿ ದಳದ ಸೈನಿಕನಾಗಿದ್ದ ಮಂಗಲ ಪಾಂಡೆ ಎನ್ ಫೀಲ್ಡ್ ಬಂದೂಕು ಬಳಸಲು ನಿರಾಕರಣೆ ಮಾಡಿ ಹೋರಾಟ ಮಾಡಿದ ಪರಿಣಾಮವಾಗಿ ಮಂಗಲಪಾಂಡೆಯವರನ್ನು ಗಲ್ಲಿಗೇರಿಸಲಾಯಿತು. ಇವರ ಹೋರಾಟದ ಪ್ರತಿಫಲವಾಗಿ ಇಡೀ ದೇಶದ ಎಲ್ಲೆಡೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿ ಆರಂಭವಾಗಿ ಮುಂದೆ ಬ್ರಿಟಿಷರಿಗೆ ಎಚ್ಚರಿಕೆಯ ಗಂಟೆಯಾಯಿತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ನಾವೆಲ್ಲರೂ ಅರಿಯಬೇಕೆಂದರು. ಮಂಗಲ ಪಾಂಡೆ ರವರ ಸ್ಮರಣಾರ್ಥವಾಗಿ ಅಂಚೆ ಚೀಟಿ ಬಿಡುಗಡೆ, ಚಲನಚಿತ್ರ ಹಾಗೂ ನಾಟಕಗಳು, ಲಾವಣಿಗಳು ಹೊರಬಂದಿವೆ ಎಂದು ತಿಳಿಸಿದರು.

ಶಾರದಾ ಭಜನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಮಾಲಾ ಅವರು ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ಭಾರತಾಂಬೆಗೆ ರಕ್ತಾಭಿಷೇಕ ಮಾಡಿದ ಭಾರತಾಂಬೆಯ ವೀರ ಪುತ್ರ ಮಂಗಲ ಪಾಂಡೆ. ಅವರ ದೇಶಭಕ್ತಿ, ಹೋರಾಟದ ಮನೋಭಾವ, ಸ್ವಾತಂತ್ರ್ಯದ ಅಭಿಮಾನ ಇಂದು ಪ್ರತಿಯೊಬ್ಬರಿಗೂ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಜೈ ಹಿಂದ್ ಕಟ್ಟೆ ಒಂದು ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಚಂದ್ರಮತಿ, ಶಂಕರಪುರ ಹಿತರಕ್ಷಣ ಸಮಿತಿಯ ರವಿ, ಸರಸ್ವತಿ ರಾಜೇಂದ್ರ, ಋಗ್ವೇದ ಕ್ಲಬ್ ನಿರ್ದೇಶಕರಾದ ಸುಪ್ರಿಯಾ ಭಾರದ್ವಾಜ್, ಸಾನಿಕ ಮತ್ತು ಶ್ರಾವ್ಯ ಎಸ್.ಋಗ್ವೇದಿ, ಮಹದೇವ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *