ಮೈಸೂರು ವಿಶ್ವವಿಖ್ಯಾತಿಗೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ

ಚಾಮರಾಜನಗರ: ಮೈಸೂರು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ೭೦ ವರ್ಷಗಳ ಸುದೀರ್ಘ ಆಳ್ವಿಕೆ ನಡೆಸಿ ಇಡೀ ವಿಶ್ವದಲ್ಲಿ ಮೈಸೂರು ಸಂಸ್ಥಾನವನ್ನುವನ್ನು ವಿಶ್ವ ವಿಖ್ಯಾತಿ ಹೊಂದುವಂತೆ ಮಾಡಿದರು ಎಂದು ಸಾಹಿತಿಗಳು ಹಾಗೂ ವೈದ್ಯರಾದ ಗುರುಕಿರಣ್ ಅವರು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಹಮ್ಮಿಕೊಂಡಿದ್ದ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದಲ್ಲಿ ಸಾರ್ವಜನಿಕ ಪ್ರಾಥಮಿಕ ವೈದ್ಯಕೀಯ ಸೇವೆಯನ್ನು ಸ್ಥಾಪನೆ ಮಾಡುವ ಮೂಲಕ ಮೊಟ್ಟಮೊದಲಿಗೆ ವೈದ್ಯಕೀಯ ನೆರವು ನೀಡಿದರು. ಮೈಸೂರಿನಲ್ಲಿ ಕಲೆ, ಸಾಹಿತ್ಯ, ಸಂಗೀತ, ಲಲಿತಾ ಕಲೆ, ವೈದ್ಯಕೀಯ, ಸೇವೆ, ನಗರ ನಿರ್ಮಾಣ, ಯಕ್ಷಗಾನ, ಮುಂತಾದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿ ಸಾಂಸ್ಕೃತಿಕ ಕಲಾನಗರ ಮತ್ತು ಸಾಂಸ್ಕೃತಿಕ ರಾಜಧಾನಿಯನ್ನಾಗಿ ರೂಪಿಸಿದ ಮಹಾನ್ ಶ್ರೇಷ್ಠರು ಎಂದು ತಿಳಿಸಿದರು.

ಕಾವೇರಿ ನದಿಗೆ ಶಿವನಸಮುದ್ರದ ಬಳಿ ಸೇತುವೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿದರು. ಒಡೆಯರ ಕಾಲದಲ್ಲಿ ಮೈಸೂರು ಸಂಸ್ಥಾನ ವಿಶ್ವವಿಖ್ಯಾತಿ ಹೊಂದಿತು. ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ನೆನೆಯುವ ಮೂಲಕ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷರಾದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಅರಿಕೊಠಾರಕ್ಕೆ ಚಾಮರಾಜನಗರದ ಹೆಸರನ್ನು ಇಟ್ಟವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು. ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಮೈಸೂರು ,ಮಂಡ್ಯ, ಚಾಮರಾಜನಗರ ಸುತ್ತಮುತ್ತಲಿನ ಭಾಗಗಳಿಗೆ ನೀರಾವರಿ ಮೂಲಕ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಆಹಾರ ಕ್ರಾಂತಿ ಮಾಡಿದರು ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಉತ್ತಮ ಆಡಳಿತಗಾರರು. ಅಷ್ಟೇ ಅಲ್ಲದೆ ಸ್ವತಃ ಕವಿಗಳು. ಕನ್ನಡ ಮತ್ತು ಸಂಸ್ಕೃತದ ವಿದ್ವಾಂಸರಾಗಿ ೫೯ ಗ್ರಂಥಗಳ ರಚನೆ ಮಾಡಿ ದೇಶ ವಿದೇಶಗಳ ಕಲಾವಿದರನ್ನು ಮೈಸೂರು ಸಂಸ್ಥಾನಕ್ಕೆ ಆಹ್ವಾನಿಸಿ ದರ್ಬಾರ್ ಹಾಲಿನಲ್ಲಿ ಸಂಗೀತ ಕಚೇರಿಗಳನ್ನು ಏರ್ಪಡಿಸುವ ಮೂಲಕ ಕಲೆ, ಸಾಹಿತ್ಯ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದವರು. ವೀಣೆ ವೆಂಕಟ ಸುಬ್ಬಯ್ಯ, ಕುಣಿಗಲ್ ರಾಮಾ ಶಾಸ್ತ್ರಿ, ಸೋಸಲೆ ಗರಣ ಪುರಿ ಶಾಸ್ತ್ರಿ, ಬಸವಪ್ಪ ಶಾಸ್ತ್ರಿ , ಕೆಂಪನಾರಾಯಣ ಮುಂತಾದ ಶ್ರೇಷ್ಠ ವಿದ್ವಾಂಸರಿಗೆ ಆಶ್ರಯ ನೀಡಿದವರು. ಸಂಗೀತಗಾರರು ,ಲೇಖಕರು ಕಲಾಕಾರರು, ಸಾಹಿತಿಗಳು, ವೇದ ವಿದ್ವಾಂಸರು, ಆಡಳಿತಗಾರರು, ಸರ್ವ ಜನರಿಗೆ ಆಶ್ರಯ ನೀಡಿದ ಕೃಷ್ಣರಾಜ ಒಡೆಯರ್ ಅವರನ್ನು ನೆನೆಸಿಕೊಳ್ಳುವುದೇ ಒಂದು ಪುಣ್ಯದ ಕೆಲಸವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಕೀಲರು ಮತ್ತು ನೋಟರಿ ಎಂ.ಪಿ.ನಾಗಲಕ್ಷ್ಮಿ, ಶ್ರೀಮತಿ ಪ್ರಫುಲ್ಲ ಗುರುಕಿರಣ್, ಕಸಾಪ ಕೋಶಾಧ್ಯಕ್ಷ ಮಹದೇವಪ್ಪ, ನಿರ್ದೇಶಕರಾದ ಬಿ.ಕೆ.ಆರಾಧ್ಯ, ರವಿಚಂದ್ರ ಪ್ರಸಾದ್, ಸರಸ್ವತಿ, ಕನ್ನಡ ಹೋರಾಟಗಾರರಾದ ಪುಟ್ಟಸ್ವಾಮಿ, ಋಗ್ವೇದಿ ಯೂತ್ ಕ್ಲಬ್‌ನ ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *