ಚಾಮರಾಜನಗರ: ಜಿಲ್ಲೆಯ ಯಳಂದೂರು ಪಿಎಲ್ಡಿ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿ, ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವ ಜೊತೆಗೆ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನೀಡುವ ವಾರ್ಷಿಕ ಪ್ರಶಸ್ತಿಯನ್ನು ನಾಲ್ಕನೇ ಬಾರಿಯು ಪಡೆದುಕೊಳ್ಳುವ ಮೂಲಕ ಅದ್ವೀತೀಯ ಸಾಧನೆ ಮಾಡಿದೆ.
ಜಿಲ್ಲೆಯ ವ್ಯಾಪ್ತಿಯ ಪಿಎಲ್ಡಿ ಬ್ಯಾಂಕ್ಗಳ ಪೈಕಿ ಯಳಂದೂರು ತಾಲೂಕು ಪಿಎಲ್ಡಿ ಬ್ಯಾಂಕ್ ರೈತರಿಗೆ ಸಾಲ ನೀಡಿ, ವಸೂಲಾತಿ ಮಾಡುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸಾಧನೆ ಮಾಡುತ್ತಾ ಬಂದಿರುವ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ,ಪಿ. ನಿರಂಜನಮುರ್ತಿ ಹಾಗೂ ವ್ಯವಸ್ಥಾಪಕ ವೆಂಕಟೇಶ್ ಅವರನ್ನು ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾಸ್ಕಾರ್ಡ್ ಬ್ಯಾಂಕಿನ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹಾಗು ಆಡಳಿತ ಮಂಡಲಿಯ ಸದಸ್ಯರು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಯಳಂದೂರು ಆಡಳಿತ ಮಂಡಲಿ ಹಾಗೂ ನೌಕರರ ಸಾಧನೆಯನ್ನು ಪ್ರಶಂಸಿಸಿದರು.
ಪ್ರಶಸ್ತಿ ಸ್ವೀಕರಿಸಿದ ಯಳಂದೂರು ತಾಲೂಕು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಪಿ.ನಿರಂಜನಮೂರ್ತಿ ಮಾತನಾಡಿ, ಕಳೆದ 2019 ರಿಂದಲೂ ನಮ್ಮ ಬ್ಯಾಂಕ್ ರೈತರಿಗೆ ಸಾಲ ನೀಡುವ ಜೊತೆಗೆ ಸಮರ್ಪಕವಾಗಿ ಕಂತು ಪಾವತಿ ಯಾಗುವಂತೆ ಮಾಡುತ್ತಾ ಬಂದಿದೆ. ಪ್ರತಿ ರೈತರ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಜೊತೆಗೆ ಸರ್ಕಾರದ ಸಹಾಯಧನ ಇತರೇ ರಿಯಾಯಿತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಾಲದ ಕಂತುಗಳನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಯಳಂದೂರು ತಾಲೂಕು ಚಿಕ್ಕ ತಾಲೂಕು ಆದರು ಸಹ ಸಾಧನೆ ಮಾತ್ರ ಹೆಚ್ಚಿನದಾಗಿದೆ. ಈ ಪ್ರಶಸ್ತಿ ನಮ್ಮ ಪಿಎಲ್ಡಿ ಬ್ಯಾಂಕ್ ವ್ಯಾಪ್ತಿಯ ರೈತರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಉಳುವಪ್ಪ ತಿಮ್ಮಪ್ಪ ದಾಸನೂರ, ಮೈಸೂರು- ಚಾ.ನಗರ ರಾಜ್ಯ ಬ್ಯಾಂಕ್ ಜಿಲ್ಲಾ ನಿರ್ದೇಶಕ ಎಂ. ಮಹದೇವಣ್ಣ, ಜಿಲ್ಲಾ ವ್ಯವಸ್ಥಾಪಕಿ ರಶ್ಮಿತಾ, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್, ಯಳಂದೂರು ಪಿಎಲ್ಡಿ ಬ್ಯಾಂಕ್ನ ಉಪಾದ್ಯಕ್ಷ ಕ್ಯಾತಶೆಟ್ಟಿ, ನಿರ್ದೇಶಕರಾದ ಎಸ್. ಪುಟ್ಟಬುದ್ದಿ, ಕೆ.ಎಂ. ಶಿವಣ್ಣ, ಶಿವಶೇಖರ್, ರಾಮಚಂದÀ್ರು, ಮಹೇಶ್, ಲಕ್ಷಮ್ಮಣ್ಣಿ, ಎಚ್.ಎಂ. ಸಿದ್ದರಾಜು, ಉಮೇಶ, ಎಪಿಎಂಸಿ ನಿರ್ದೇಶಕ ಎಲ್. ರಾಮಚಂದ, ಮಹೇಶ ಮೆಲ್ಲಹಳ್ಳಿ ಮೊದಲಾಧವರು ಇದ್ದರು.