ಚಾಮರಾಜನಗರ: ರೇಷ್ಮೆ ಇಲಾಖೆ ವತಿಯಿಂದ 2022-23ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಲ್ಟಿ ಎಂಡ್, ಕಾಟೇಜ್ ಬೇಸಿನ್, ಸ್ವಯಂಚಾಲಿತ ನೂಲು ಬಿಚ್ಚಾಣಿಕೆ ಯಂತ್ರದ ಮೂಲಕ ರೇಷ್ಮೆ ಕೃಷಿಯಲ್ಲಿ ತೊಡಗಿರುವ ನೂಲು ಬಿಚ್ಚಾಣಿಕೆದಾರರು ಪ್ರಸಕ್ತ ಸಾಲಿಗೆ ನಿಯಮಾನುಸಾರ ಕಡ್ಡಾಯವಾಗಿ ನೋಂದಾಯಿಸಿರಬೇಕು. ಕನಿಷ್ಟ 6 ಮಲ್ಟಿ ಎಂಡ್ ಬೇಸಿನ್, ಕಾಟೇಜ್ ಬೇಸಿನ್ ಹೊಂದಿರಬೇಕು. ಸ್ವಯಂಚಾಲಿತ ನೂಲು ಬಿಚ್ಚಾಣಿಕಾ ಯಂತ್ರವನ್ನು ಸ್ಥಾಪಿಸಿರಬೇಕು. ರೇಷ್ಮೆ ಗೂಡು ಮಾರುಕಟ್ಟೆಯಲ್ಲಿಯೇ ದೃಢೀಕೃತ ದಾಖಲೆಯೊಂದಿಗೆ ಗೂಡು ಖರೀದಿಸಿರಬೇಕು. ವರ್ಷದಲ್ಲಿ ಖರೀದಿಸಿದ ಗೂಡನ್ನು ಸಂಪೂರ್ಣವಾಗಿ ನೂಲು ಬಿಚ್ಚಾಣಿಕೆಗೆ ಬಳಸಿರಬೇಕು. ಖರೀದಿಸಿದ ಗೂಡುಗಳನ್ನು ಇತರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿರಬಾರದು.
ಅರ್ಹ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿಗಳು(ರೀಲಿಂಗ್) ರೇಷ್ಮೆ ಸಹಾಯಕ ನಿರ್ದೇಶಕರ (ಗೂನಂಚ) ಕಚೇರಿ ಸಂಪರ್ಕಿಸಿ ಮಾಹಿತಿ ಪಡೆದು ಅಗತ್ಯ ಮಾಹಿತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 17ರೊಳಗೆ ಕಚೇರಿಗೆ ಸಲ್ಲಿಸಬೇಕು ಎಂದು ಕೊಳ್ಳೇಗಾಲದ ರೇಷ್ಮೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.