ಚಾಮರಾಜನಗರ: ಜಿಲ್ಲೆಯ ಎಲ್ಲಾ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಅನುಕೂಲವಾಗುವಂತೆ ಅಗತ್ಯ ಶೌಚಾಲಯ, ಲಿಫ್ಟ್ ಹಾಗೂ ರ್ಯಾಂಪ್ ಸೇರಿದಂತೆ ಇತರೆ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಮಾಡಿಕೊಡುವಲ್ಲಿ ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆಯ ಕೆ.ಡಿ.ಪಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾಮಟ್ಟದ ವಿಕಲಚೇತನರ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗಾಗಿ ಮೀಸಲಾಗಿರುವ ಶೌಚಾಲಯಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ವಿಕಲಚೇತನರಿಗಾಗಿ ಮೂಲ ಸೌಲಭ್ಯಗಳನ್ನು ಕಲ್ಪಿಸದಿರುವ ಬಗ್ಗೆ ಪರಿಶೀಲಿಸಲು ಅಧಿಕಾರಿಗಳು, ಎನ್.ಜಿ.ಒ ಗಳು ಸೇರಿದಂತೆ ಆಡಿಟ್ ಸಮಿತಿ ರಚಿಸಲಾಗುವುದು. ಸಮಿತಿಯು 3 ತಿಂಗಳೊಳಗೆ ವರದಿ ಸಲ್ಲಿಸಬೇಕು. ಈ ಸಂಬಂಧ ಮುಂದಿನ ಆರು ತಿಂಗಳೊಳಗೆ ಮೂಲ ಸೌಕರ್ಯಗಳ ಕೆಲಸ ಕಾಮಗಾರಿಗಳನ್ನು ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ವಿವಿಧ ಇಲಾಖೆಗಳ ಮೂಲಕ ಸರ್ಕಾರವು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸೌಲಭ್ಯ, ಸವಲತ್ತುಗಳನ್ನು ಒದಗಿಸುತ್ತಿದೆ. ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕುಗಳು, ವಿವಿಧ ಇಲಾಖೆಗಳು ವಿಕಲಚೇತನರ ಪ್ರಗತಿಗಾಗಿ ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಈ ಬಗ್ಗೆ ವಿಕಲಚೇತನರಿಗೆ ಅರಿವು ಮೂಡಿಸಲು ಒಂದು ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಕಲಚೇತನರಿಗೆ ಬ್ಯಾಂಕುಗಳಲ್ಲಿ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಸವಿವರವಾಗಿ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಬೇಕು. ವಿಶೇಷಚೇತನರಿಗೆ ಮೊದಲ ಆದ್ಯತೆ ನೀಡಬೇಕು. ಬ್ಯಾಂಕ್ಗಳಲ್ಲಿ ವಿಶೇಷಚೇತನರು ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದಿರುವುದರಿಂದ ಎಲ್ಲಾ ಬ್ಯಾಂಕ್ಗಳಲ್ಲಿಯೂ ಪ್ರತ್ಯೇಕ ಕೌಂಟರ್ ತೆರೆಯಬೇಕು. ಸಿಂಗಲ್ ಓಪನ್ ವಿಂಡೋ ವ್ಯವಸ್ಥೆ ಮಾಡಬೇಕು. ಇದು ತಿಂಗಳಲ್ಲಿಯೇ ಆಗಬೇಕು ಎಂದು ತಿಳಿಸಿದರು.
ವಿಕಲಚೇತನರಿಗೆ ಜಾಬ್ಕಾರ್ಡ್ ಪಿಂಚಣಿ ಸೌಲಭ್ಯ ನಿಗಧಿತ ಅವಧಿಯಲ್ಲಿ ನೀಡಬೇಕು. ವಿವಿಧ ಇಲಾಖೆಗಳಲ್ಲಿ ವಿಶೇಷಚೇತನರಿಗಾಗಿ ಮೀಸಲಿರಿಸುವ ಶೇ. 5ರಷ್ಟು ಅನುದಾನವನ್ನು ಪಾರದರ್ಶಕ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ವಿಕಲಚೇತನರಿಂದ ಅರ್ಜಿ ಸ್ವೀಕರಿಸಲು ಅನುಕೂಲವಾಗುವಂತೆ ಸಿಂಗಲ್ ಹೆಲ್ಪ್ಡೆಸ್ಕ್ (ಸಹಾಯವಾಣಿ) ತೆರೆಯಬೇಕು. ಸಹಾಯವಾಣಿ ಕೇಂದ್ರದಲ್ಲಿ ಎಲ್ಲಾ ದೂರವಾಣಿ ಸಂಖ್ಯೆಗಳು ವಿಕಲಚೇತನರಿಗೆ ದೊರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಅಶಾಕಿರಣ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಮಟ್ಟದಿಂದ ನಗರ ಪ್ರದೇಶಗಳಲ್ಲಿನ 5 ವರ್ಷದಿಂದ 10 ವರ್ಷದೊಳಗಿನ ದೃಷ್ಠಿಮಾಂದ್ಯ ಮಕ್ಕಳನ್ನು ಅಂಗನವಾಡಿ ಕಾರ್ಯಕರ್ತೆಯರಿಂದ ಗುರುತಿಸಿ ಅಂತಹ ಮಕ್ಕಳ ಬಗ್ಗೆ ವಿಶೇಷ ನಿಗಾ ವಹಿಸಿ ದೃಷ್ಠಿದೋಷವನ್ನು ಪ್ರಾಥಮಿಕ ಹಂತದಲ್ಲಿಯೇ ಪರಿಹರಿಸಬೇಕು. ತಪ್ಪಿದಲ್ಲಿ ಜೀವನವಡೀ ಬರೀ ಪಿಂಚಣಿಗಾಗಿ ಸರ್ಕಾರಿ ಕಚೇರಿ ಅಲೆಯಬೇಕಾಗುತ್ತದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ದೃಷ್ಠಿದೋಷ ಮಕ್ಕಳ ಚೆಕ್ಲಿಸ್ಟ್ ನೀಡಿದರೇ ಸರ್ವೇ ಕಾರ್ಯ ಆರೆಂಭಿಸಲು ಅನುಕೂಲವಾಗಲಿದೆ ಎಂದರು.
ಈಗಾಗಲೇ ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರಿಗೆ ಅವಶ್ಯವಾಗಿರುವ ಬೆಥನ್ (ಡಿಜಿಟಲ್ ಗ್ರಂಥಾಲಯ) ಲೈಬ್ರರಿಯನ್ನು ತೆರೆಯಲಾಗಿದೆ. ವಿಕಲಚೇತನರು ಹೆಡ್ಪೋನ್ ಸಹಾಯದಿಂದ ಸಿಸ್ಟಮ್ನಲ್ಲಿ ವಿಷಯಾಧಾರಿತ ಮಾಹಿತಿ ಸಂಗ್ರಹಿಸಬಹುದು. ಇದೊಂದು ಉತ್ತಮ ಯೋಜನೆಯಾಗಿದ್ದು, ಕರ್ನಾಟಕದಲ್ಲಿ ಮೊದಲು ಜಾರಿಗೆ ಬಂದಿತು. ಬಳಿಕ ದೇಶಾದ್ಯಂತ ವಿವಿಧ ರಾಜ್ಯಗಳು ಯೋಜನೆಯನ್ನು ಅಳವಡಿಸಿಕೊಂಡಿವೆ. ಜಿಲ್ಲೆಯಾದ್ಯಂತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೀಕರ್ ಲೈಬ್ರರಿಗಳನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಇಲಾಖೆಗಳು ಅಂಗವಿಕಲರ ಕಲ್ಯಾಣ ಹಾಗೂ ಸಬಲೀಕರಣಕ್ಕಾಗಿ ಹೆಚ್ಚು ಗಮನಹರಿಸಬೇಕು. ವಿಕಲಚೇತನರು ಯೋಜನೆಗಳನ್ನು ಪಡೆದು ಅರ್ಥಿಕ ಸದೃಢರಾಗಬೇಕು. ವಿಶೇಷಚೇತನರ ಒಳಿತಿಗಾಗಿ ಎಲ್ಲಾ ಅಧಿಕಾರಿಗಳು ವಿಶೇಷ ಕಾಳಜಿ ನೀಡಬೇಕು. ವಿಶೇಷಚೇತನರು ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಕೆ.ಎಸ್.ಆರ್.ಟಿ.ಸಿ ಬಸ್ಗಳಲ್ಲಿ ಅಂಗವಿಕಲರಿಗೆ ಸೀಟ್ಗಳನ್ನು ಮೀಸಲಿರಿಸಬೇಕು. ಅಧಿಕಾರಿಗಳು ಅಂಗವಿಕಲರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಿಕಲಚೇತನರ ಆರೋಗ್ಯ ತಪಾಸಣೆಗಾಗಿ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಇದೇ ವೇಳೆ ಜಿಲ್ಲಾ ಹಾಗೂ ತಾಲೂಕುಮಟ್ಟದ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಅಂಗವಿಕಲರ ದೂರು, ಮನವಿಗಳನ್ನು ಜಿಲ್ಲಾಧಿಕಾರಿಯವರಿಗೆ ಮನದಟ್ಟು ಮಾಡಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಜಿಲ್ಲೆಯ ಎಲ್ಲಾ ವಿಕಲಚೇತನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರವಾಗಿ ಪರಿಹರಿಸಲಾಗುವುದಾಗಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಗೀತಾಲಕ್ಷ್ಮೀ, ಆಹಾರ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.