ಸಂವಿಧಾನದ ಕಟ್ಟು ಪಾಡುಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡುವುದೇ ಸ್ವಾತಂತ್ರ್ಯ

ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಅಭಿಪ್ರಾಯ
ಮೈಸೂರು: ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪರಮಪೂಜ್ಯ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ವೇದಿಕೆಯ ಮೇಲಿನ ಗಣ್ಯರು ಧ್ವಜಾರೋಹಣ ಮಾಡಿದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡುತ್ತಾ, ಸಂವಿಧಾನದ ಕಟ್ಟು ಪಾಡುಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡುವುದೇ ಸ್ವಾತಂತ್ರ್ಯ ಎಂದು ತಿಳಿಸಿದರು. ಬದುಕಿನ ಉದ್ದಕ್ಕೂ ಶಿಸ್ತು ಎಂಬುದು ಮುಖ್ಯ ಎಂದು ಮಕ್ಕಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯ ಧ್ವನಿ ಮಾಸಿಕ ಪತ್ರಿಕೆ ಆಗಸ್ಟ್- ೨೩ ಅನ್ನು ಶ್ರೀಗಳು ಅನಾವರಣಗೊಳಿಸಿದರು. ಮಕ್ಕಳ ಪಥಸಂಚಲನ ಗಮನ ಸೆಳೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ನಿವೃತ್ತ ಪ್ರಾಧ್ಯಾಪಕ ಕೆ.ಎಸ್.ಚಂದ್ರಶೇಖರ್ ಅವರು ಮಾತನಾಡಿ, ಸೈನಿಕರ ತ್ಯಾಗ, ಬಲಿದಾನದಿಂದ ನಮ್ಮ ದೇಶ ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯವಾಗಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಹಲವು ಸಂಘಸಂಸ್ಥೆಗಳು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಪೇಜಾವರ ಮಠವು ಕೂಡ ಒಂದು. ನಾವು ಎಲ್ಲೆ ಇದ್ದರೂ ನಮ್ಮ ಸಂಸ್ಕಾರ, ಸಂಸ್ಕೃತಿ, ಭಾರತೀಯತೆ ಎಂಬುದು ನಮ್ಮ ರಕ್ತದಲ್ಲಿರಬೇಕು ಎಂದು ತಿಳಿಸುತ್ತಾ, ಕುವೆಂಪುರವರ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳುವ ಮೂಲಕ ಮಕ್ಕಳಲ್ಲಿ ದೇಶ ಪ್ರೇಮದ ಅರಿವು ಮೂಡಿಸಿದರು.

ತಾಯಿ, ಮಾತೃ ಭಾಷೆ, ಮಾತೃಭೂಮಿಯ ಮೇಲೆ ಅಪಾರ ಪ್ರೀತಿ ಇರಬೇಕೆಂದು ತಿಳಿಸುತ್ತಾ, ನಮ್ಮ ಮಾತು, ನಿಮ್ಮ ನಡವಳಿಕೆ, ಕೆಟ್ಟ ಆಲೋಚನೆಯನ್ನು ಪರಾಮರ್ಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತಿರಬೇಕು ಎಂದು ಮಕ್ಕಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಜಯ ವಿಠಲ ಟ್ರಸ್ಟಿಗಳಲ್ಲೊಬ್ಬರಾದ ಎ.ವಿಶ್ವನಾಥ್ ಅವರು ಮಾತನಾಡಿ, ಭಾರತದ ಅಸ್ಥಿತ್ವ ಸಹಸ್ರಾರು ವರ್ಷಗಳದ್ದು ಎಂಬುದನ್ನು ಹಲವು ನಿದರ್ಶನಗಳ ಮೂಲಕ ತಿಳಿಸಿದರು.

ನಮ್ಮ ದೇಶದಲ್ಲಿ ಆಗುತ್ತಿರುವ ಸಂಶೋಧನೆಗಳು ಯಾವ ದೇಶದಲ್ಲೂ ಆಗುತ್ತಿಲ್ಲ, ನಮ್ಮ ದೇಶದಲ್ಲಿ ಹುಟ್ಟಿದ್ದೆ ಶ್ರೇಷ್ಠ ಎಂದು ತಿಳಿದುಕೊಳ್ಳಬೇಕು. ನಮ್ಮ ದೇಶ ಹಿಂದಷ್ಟೇ ಅಲ್ಲ ಈಗ ಆರ್ಥಿಕತೆಯಲ್ಲಿ ೫ನೇ ಸ್ಥಾನಕ್ಕೆ ಏರುವ ಮೂಲಕ ಜಗತ್ತಿನ ಶ್ರೇಷ್ಠ ದೇಶಗಳನ್ನ ಹಿಂದಿಕ್ಕಿ ಮುನ್ನುಗ್ಗುತ್ತಿದ್ದೇವೆ. ವಿದೇಶದ ಹಲವು ವ್ಯಾಪಾರಸ್ಥರು ನಮ್ಮ ದೇಶದಲ್ಲಿ ಹೂಡಿಕೆ ಮಾಡುವಷ್ಟು ನಮ್ಮ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ದೇಶ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ನಾವೆಲ್ಲರೂ ಸಮಾಜಮುಖಿ ಕೆಲಸ ಮಾಡುತ್ತ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಮಕ್ಕಳಿಗೆ ತಿಳಿಸಿದರು.

ಶಾಲೆಯ ಮಕ್ಕಳಿಂದ ಅಭೂತಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಮೈಮನಸ್ಸುಗಳನ್ನು ಸೆಳೆಯಿತು.

ಈ ಸಂದರ್ಭದಲ್ಲಿ ವಿಜಯ ವಿಠ್ಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿಗಳಾದ ವಾಸುದೇವ್ ಭಟ್ ಅವರು, ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸತ್ಯಪ್ರಸಾದ್ ರವರು, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವೀಣಾ.ಎಸ್.ಎ.ರವರು, ಶಾಲೆಯ ವಿವಿಧ ಮುಖ್ಯಸ್ಥರು, ಮಕ್ಕಳು, ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಉಪಸ್ಥಿತರಿದ್ದ ಮಕ್ಕಳಿಗೆ ಪೋಷಕರಿಗೆ ಸಿಹಿ ಹಂಚಲಾಯಿತು.

Leave a Reply

Your email address will not be published. Required fields are marked *