ರೈತರಿಗೆ 1.80 ಕೋಟಿ ರೂ. ಸಾಲ ವಿತರಣೆ : ಆರ್.ವೆಂಕಟೇಶ್
ಚಾಮರಾಜನಗರ: ತಾಲೂಕಿನ ಹರದನಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು 7 ವರ್ಷಗಳ ಅವಧಿಯಲ್ಲಿ 42 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಜೊತೆಗೆ ಪ್ರಸಕ್ತ ವರ್ಷದಲ್ಲಿ 1.03 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಎಂದು ಸಂಘದ ಅಧ್ಯಕ್ಷ ಆರ್.ವೆಂಕಟೇಶ್ ತಿಳಿಸಿದರು.

ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಅವರಣದಲ್ಲಿ ನಡೆದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷ 203 ಮಂದಿಗೆ ರೈತರಿಗೆ 1,85,75000 ರೂಗಳ ಕೃಷಿ ಸಾಲವನ್ನು ನೀಡಲಾಗಿದೆ. 26 ಮಹಿಳಾ ಮತ್ತು ಪುರುಷ ಸ್ವ ಸಹಾಯ ಸಂಘಗಳಿಗೆ 1.06 ಕೋಟಿ ರೂ.ಗಳ ಸಾಲ ನೀಡಿದ್ದು, 140 ಮಂದಿ ಸಾಮಾನ್ಯ ಸದಸ್ಯರಿಗೆ 64 ಲಕ್ಷ ರೂ.ಗಳ ಸಾಲ, 14 ಮಂದಿಗೆ 20 ಲಕ್ಷ ರೂ.ಗಳ ವಾಹನ ಸಾಲ ನೀಡಲಾಗಿದೆ ಎಂದರು.
ಭಾಗ್ಯ ಲಕ್ಷ್ಮಿ ನಿಶ್ವಿತ ಠೇವಣಿಯಡಿಯಲ್ಲಿ 8 ಮಂದಿ 11.15 ಲಕ್ಷ ರೂ.ಗಳ ಠೇವಣಿಯನ್ನು ಇಟ್ಟಿದ್ದಾರೆ. ಸಹಕಾರ ಸಂಘವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸಂಘದ ಲಾಭಾಂಶ ಸೇರಿದೆ ಆಪೆಕ್ಸ್ ಬ್ಯಾಂಕ್ನಿಂದ ರಾಜ್ಯ ಉಪಾಧ್ಯಕ್ಷರಾಗಿರುವ ಎಂಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾದ ಜಿ.ಡಿ. ಹರೀಶ್ ಅವರು 15 ಲಕ್ಷ ರೂ.ಗ ಸಹಾಯಧನ , ನಬಾರ್ಡ್ ಮತ್ತು ಎಂಡಿಸಿಸಿ ಬ್ಯಾಂಕ್ನಿಂದ 23 ಲಕ್ಷ ರೂ.ಗಳ ಸಾಲ ಹಾಗೂ ಸಂಘದ ಕಟ್ಟಡ ಕಲ್ಯಾಣ ನಿಧಿ 4.20 ಲಕ್ಷ ರೂ.ಗಳನ್ನು ಕ್ರೋಡಿಕರಿಸಿ, ಹರದನಹಳ್ಳಿಯ ಮುಖ್ಯ ರಸ್ತೆಯಲ್ಲಿ 42.20 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು, ಇನ್ನು ಆರು ತಿಂಗಳ ಅವಧಿಯಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಲಾಗುತ್ತದೆ ಎಂದರು.
ತಾಲೂಕಿನಲ್ಲಿ ನಮ್ಮ ಸಹಕಾರಿ ಸಂಘವು 1800 ಕ್ಕು ಹೆಚ್ಚು ಸದಸ್ಯರನ್ನು ಯಶಸ್ವಿನಿ ಯೋಜನೆಗೆ ಸೇರ್ಪಡೆ ಮಾಡಿರುವ ಕೀರ್ತಿಯನ್ನು ಪಡೆದುಕೊಂಡಿದೆ. ಹೆಚ್ಚಿನ ಕುಟುಂಬಗಳನ್ನು ಯಶಸ್ವಿನಿ ಯೋಜನೆಗೆ ಸೇರಿಸುವ ಮೂಲಕ ಈ ಯೋಜನೆ ಅನುಕೂಲವನ್ನು ಕಲ್ಪಿಸಿಕೊಡಲಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ, ವರ್ಗ ಹಾಗೂ ಓಬಿಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಗೆ ಸೇರ್ಪಡೆಯಾಗಿರುತ್ತದೆ. ಸಂಘದ ಸಂಸ್ಥಾಪಕರಾದ ದಿ. ಎಂ. ಶಿವಕುಮಾರ್ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಎಚ್.ಎನ್. ಸುಂದರರಾಜ್ ಅವರ ಸೇವೆಯನ್ನು ಸ್ಮರಿಸಿದರು. ಹೊಸ ಕಟ್ಟಡ ನಿರ್ಮಾಣದ ಬಳಿಕ ಸಂಘದ ಸರ್ವ ಸದಸ್ಯರ ಅಭಿಪ್ರಾಯದಂತೆ ಪ್ರತಿ ವರ್ಷದ ಸಂಘದ ಲಾಭಂಶವನ್ನು ಷೇರು ದಾರರಿಗೆ ನೀಡುವ ಆಶಯವನ್ನು ಅಧ್ಯಕ್ಷ ವೆಂಕಟೇಶ್ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಪದೇ ಪದೇ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಇಲ್ಲಸಲ್ಲದ ಮಾಹಿತಿಯನ್ನು ಕೇಳುವ ಮೂಲಕ ಸಂಘದ ಆಡಳಿತ ಮಂಡಲಿ ಮತ್ತು ನೌಕರರಿಗೆ ಕಿರಿಕಿರಿ ಉಂಟು ಮಾಡುವ ಜೊತೆಗೆ ಕ್ರಿಮಿನಾಲ್ ಹಿನ್ನಲೆಯ ಹೊಂದಿರುವ ಕಾರಣದಿಂದ ಸಂಘದ ಬೈಲ್ ದಂತೆ ಗಣೇಶ್ ಬಿನ್ ಚಿಕ್ಕನಾಗನಾಯಕ ಹಾಗೂ ಕುಟುಂಬದವರ ಸದಸ್ಯತ್ವವನ್ನು ರದ್ದುಪಡಿಸಲು ಸಭೆಯಲ್ಲಿ ಸರ್ವನುಮತದಿಂದ ಒಪ್ಪಿಗೆ ಪಡೆದು ಅಧ್ಯಕ್ಷರಾದ ವೆಂಕಟೇಶ್ ಅನೇಕ ವಿಚಾರಗಳನ್ನು ಸಭೆಯ ಗಮನಕ್ಕೆ ತಂದು ಸದಸ್ಯತ್ವ ರದ್ದಪಡಿಸಿರುವುದಾಗಿ ಘೋಷಣೆ ಮಾಡಿದರು.
ಸಂಘದ ಉಪಾಧ್ಯಕ್ಷ ಎಚ್.ಎಂ. ಮಹದೇವಶೆಟ್ಟಿ ಮಾತನಾಡಿ, ಹರದನಹಳ್ಳಿ ಸಹಕಾರ ಸಂಘವು ಆಡಳಿತ ಮಂಡಲಿ ಹಾಗು ನೌಕರರ ಶ್ರಮದಿಂದ ಲಾಭವನ್ನು ಪಡೆದುಕೊಳ್ಲುವ ಜೊತೆಗೆ ರೈತರಿಗೆ ಹೆಚ್ಚಿನ ಸಾಲಸೌಲಭ್ಯವನ್ನು ಕಲ್ಪಿಸಿಕೊಡುತ್ತಿದೆ. ಹೀಗಾಗಿ ಗ್ರಾಮದಲ್ಲಿರುವ ಸಹಕಾರ ಸಂಘವು ಹರದನಹಳ್ಳಿ, ಬಂಡಿಗೆರೆ ಹಾಗೂ ಚಂದ್ರುಕಟ್ಟೆ ಮೋಳೆಯ ಎಲ್ಲರನ್ನು ಸದಸ್ಯರನ್ನಾಗಿಸಿಕೊಂಡು ಸಹಕಾರಿ ಸವಲತ್ತುಗಳನ್ನು ನೀಡುತ್ತಿದೆ. ಹೀಗಾಗಿ ಸಂಘಕ್ಕಾಗಿ ನಾವು ಎಂಬಂತೆ ಪರಸ್ಪರ ಸಹಕಾರದಿಂದ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸೋಣ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೆ. ಸಿದ್ದರಾಜು ಅವರು ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು. ಹೆಚ್ಚುವರಿ ಸೇರಿ 500 ರೂ. ಕಟ್ಟಿ ಸಂಘದ ಸದಸ್ಯತ್ವವನ್ನು ನವೀಕರಿಸಿಕೊಂಡರೆ ಮಾತ್ರ ಚುನಾವಣೆಯಲ್ಲಿ ಮತ ಹಾಕಲು ಅರ್ಹತೆಯನ್ನು ಪಡೆದುಕೊಳ್ಳಬೇಕು. ತಪ್ಪದೇ ಕನಿಷ್ಟ 2 ಮಹಾಸಭೆಯಲ್ಲಿ ಭಾಗವಹಿಸಿ ಸಹಿ ಹಾಕಿರಬೇಕು. ಸಂಘದ ಸದಸ್ಯರು ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಬಡ್ಡಿ ಮನ್ನಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯ ಆರಂಭಕ್ಕು ಮುನ್ನಾ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸುರೇಶ್ ನಾಗ್ ಅವರು ನಾಡ ಗೀತೆ ಹಾಗೂ ರೈತ ಗೀತೆಯನ್ನು ಹಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಎಂ. ಮಹದೇವಶೆಟ್ಟಿ, ನಿರ್ದೇಶಕರಾದ ಎಂ. ರವಿಕುಮಾರ್, ಬಂಗಾರನಾಯಕ, ಪಿ. ರವಿಕುಮಾರ್, ರಾಜಣ್ಣ, ಶಫೀ ಅಮಹದ್, ಗಿರಿಜಮ್ಮ, ಸಾವಿತ್ರಿ, ಸುಮ, ಸಿಇಓ ಸಿದ್ದರಾಜು, ಎಸ್. ಮಂಜು, ವೈ.ಜಿ. ನವೀನ್ಕುಮಾರ್, ಸಿದ್ದರಾಜು, ಎನ್. ಕೃಷ್ಣರಾಜ್, ವಿ. ಯೋಗನರಸಿಂಹ ಸ್ವಾಮಿ ಹಾಗೂ Àಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.