ಹೈನುಗಾರಿಕೆಯಿಂದ ಸಮೃದ್ದಿ ಜೀವನ ನಿರ್ವಹಣೆ : ವೈ.ಸಿ.ನಾಗೇಂದ್ರ

ಹಳೇಪುರ ಡೇರಿ ವಾರ್ಷಿಕ ಸಭೆ ಉದ್ಗಾಟನೆ : ೨ ಲಕ್ಷ ರೂ. ಅನುದಾನ ನೀಡಲು ಸಮ್ಮತಿ
ಚಾಮರಾಜನಗರ: ಹೈನುಗಾರಿಕೆಯಿಂದ ರೈತರು ಅಭಿವೃದ್ದಿ ಹೊಂದಿಸುವ ಜೊತೆಗೆ ಗ್ಲೂಬರ್ ಗ್ಯಾಸ್ ವ್ಯವಸ್ಥೆ ಹಾಗೂ ಜಮೀನಿಗೆ ಗೊಬ್ಬರ ಸೇರಿದಂತೆ ಇತರೇ ಉಪ ಕಸುಬುಗಳನ್ನು ಅಳವಡಿಸಿಕೊಂಡು ಸ್ವಾವಲಂಬಿ ಹಾಗೂ ಸಮೃದ್ದಿ ಜೀವನ ನಡೆಸಲು ಸಾಧ್ಯವಿದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ತಿಳಿಸಿದರು.

ತಾಲೂಕಿನ ಹಳೇಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು. ಹೈನುಗಾರಿಕೆಯು ಪ್ರಮುಖ ಉದ್ಯಮವಾಗುವ ಜೊತೆಗೆ ರೈತರು ಅಡುಗೆ ಗ್ಯಾಸ್ ಅನ್ನು ಸಹ ಸಗಣಿಯಲ್ಲಿ ತಯಾರು ಮಾಡಿ ಕೊಳ್ಳುವ ಸುಲಭ ವಿಧಾನವನ್ನು ಅನುಷ್ಠಾನ ಮಾಡಿಕೊಳ್ಳಬೇಕು. ಗುಜರಾತ್‌ನಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಕಡಿಮೆ ಪ್ರಮಾಣದ ಜಾಗದಲ್ಲಿ ಗ್ಲೂಬರ್ ಗ್ಯಾಸ್ ಘಟಕ ಅಳವಡಿಸಿಕೊಂಡು ತಮ್ಮ ಮನೆಗೆ ಅಗತ್ಯವಾದಷ್ಟು ಅಡುಗೆ ಅನಿಲ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅಡುಗೆ ಅನಿಲ ಸಿಲಿಂಡರ್ ಖರೀದಿಸುವುದು ತಪ್ಪುತ್ತದೆ. ಈ ಘಟಕದಿಂದ ಹೊರ ಬಂದ ಸಗಣಿಯು ಸಹ ಜಮೀನಿಗೆ ಉತ್ತಮ ಗೊಬ್ಬರವಾಗುತ್ತದೆ. ಇಳುವಳಿಯು ಚೆನ್ನಾಗಿರುತ್ತದೆ. ಅಲ್ಲದೇ ಹಸಿ ಮೇವು ಬೆಳೆಯುವುದರಿಂದ ರಾಸುಗಳಲ್ಲಿ ಪ್ಯಾಟ್ ಅಂಶ ಹೆಚ್ಚಾಗಿ ಹಾಲಿನ ಗುಣಮಟ್ಟವು ವೃದ್ದಿಯಾಗುತ್ತದೆ ಎಂದರು.

ಹಳೇಪುರ ಡೇರಿ ಉತ್ತಮವಾಗಿ ನಡೆಯುತ್ತಿದ್ದು, ಒಕ್ಕೂಟದಿಂದ ಸಭಾಂಗಣ ನಿರ್ಮಿಸಿಕೊಳ್ಳಲು ೨ ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದ ಅಧ್ಯಕ್ಷರು, ತಾಲೂಕಿನ ನಿರ್ದೇಶಕರಾದ ಎಚ್.ಎಸ್. ಬಸವರಾಜಪ್ಪ ಹಾಗೂ ಸದಾಶಿವಮೂರ್ತಿ ಅವರು ಒಪ್ಪಿಗೆ ಮೇರೆಗೆ ನಿಮ್ಮ ಸಂಘಕ್ಕೆ ೨ ಲಕ್ಷ ರೂ. ನೀಡಲು ಬದ್ದನಾಗಿರುವುದಾಗಿ ನಾಗೇಂದ್ರ ಘೋಷಣೆ ಮಾಡಿದರು.

ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ, ಹಾಲಿನ ಡೇರಿಯಿಂದ ಗ್ರಾಮದ ಪ್ರಗತಿಯಾಗುತ್ತದೆ. ರೈತರು ಸಹ ಗುಣಮಟ್ಟದ ಹಾಲು ಪೊರೈಕೆ ಮಾಡಿ ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯಬೇಕು. ಸಂಘದ ಲಾಭಾಂಶವು ಸಹ ನಿಮಗೆ ಬರುತ್ತದೆ. ಆಡಳಿತ ಮಂಡಲಿ, ನೌಕರರು ಶ್ರದ್ದೆ ಹಾಗೂ ಪ್ರಾಮಾಣಿಕವಾಗಿದ್ದರೆ ಇನ್ನು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಹಳೇಪುರ ಡೇರಿ ಮುನ್ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಒಕ್ಕೂಟ ರಚನೆಯಾದ ಪ್ರಯುಕ್ತ ಬಹಳಷ್ಟು ಅಭಿವೃದ್ದಿಯಾಗುತ್ತಿದೆ. ಗ್ರಾಮಗಳಲ್ಲಿರುವ ಸಹಕಾರ ಸಂಘಗಳು ದೇವಾಲಯಗಳಿದ್ದಂತೆ. ಪ್ರತಿಯೊಬ್ಬರು ಶ್ರದ್ದೆಯಿಂದ ನಿರ್ವಹಣೆ ಮಾಡಿದರೆ, ಅಭಿವೃದ್ದಿಯತ್ತ ಸಾಗುತ್ತಿವೆ. ಹಳೇಪುರ ಚಿಕ್ಕ ಗ್ರಾಮವಾದರು ಸಹ ಗುಣಮಟ್ಟದ ಹಾಲು ಶೇಖರಣೆಯಿಂದ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಪಿ. ಬಸವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಡೇರಿಯ ಅಭಿವೃದ್ದಿಗೆ ಒಕ್ಕೂಟದಿಂದ ಸಹಾಯ ಧನ ನೀಡಬೇಕು. ಸಭಾಂಗಣ ನಿರ್ಮಾಣ ಮಾಡಲು ೫ ಲಕ್ಷ ರೂ. ಅನುದಾನ ನೀಡುವಂತೆ ಮನವಿ ಮಾಡಿದರು. ಪ್ರಸಕ್ತ ವರ್ಷ ಉತ್ತಮವಾಗಿ ವಹಿವಾಟು ನಡೆಸಿ, ೧.೩೪ ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಿದೆ. ಹಾಲು ಉತ್ಪಾದಕರಿಗೆ ೬೩ ಸಾವಿರ ರೂ.ಗಳ ಬೋನಸ್ ಅನ್ನು ಸದ್ಯಲ್ಲಿಯೇ ವಿತರಣೆ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಇತ್ತೀಚಿಗೆ ನಿಧನರಾದ ಸಂಘದ ನಿರ್ದೇಶಕಿ ಸುಬ್ಬಮ್ಮ ಅವರು ಕುಟುಂಬಕ್ಕೆ ಸಂಘದಿಂದ ೫ ಸಾವಿರ ರೂ. ಪರಿಹಾರ ಚೆಕ್ ವಿತರಿಸಿ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೆ. ಮರಿಸ್ವಾಮಿ ಸಂಘದ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು.

ಸಂಘದ ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ಬಿ. ಸುಂದರ್, ಎಂ. ಮಹದೇವೇಗೌಡ, ಮಂಜಿ ಮಹದೇವೇಗೌಡ, ಎಂ. ಮಾದೇಶ್, ಬಸವಣ್ಣ, ಎಂ. ರೇವಣ್ಣ, ಶಿವಯ್ಯ, ಕೆಂಪೇಗೌಡ, ಭದ್ರಮ್ಮ, ನೌಕರರಾದ ಬಿ. ಮಹೇಶ್, ಬಿ. ರಮೇಶ್ ಹಾಗೂ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *