ಅಭಿಮಾನಿ ಬಳಗದಿಂದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಜನ್ಮ ದಿನಾಚರಣೆ

ಚಾಮರಾಜನಗರ: ತಾಲೂಕಿನ ಭೋಗಾಪುರ ಗ್ರಾಮದಲ್ಲಿರುವ ದೀಪಾ ಅಕಾಡೆಮಿ ದೃಷ್ಟಿ, ವಿಕಲಚೇತನ ಮಕ್ಕಳ ವಸತಿಯುತ ಶಾಲೆಯಲ್ಲಿ ಮಾಜಿ ಕೇಂದ್ರ ಸಚಿವರು, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರ 77ನೇ ಹುಟ್ಟುಹಬ್ಬವನ್ನು
ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅಭಿಮಾನಿ ಬಳಗ ಚಾಮರಾಜನಗರ ಮತ್ತು ಮೈಸೂರು ಇವರ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅವರು ಮಾತನಾಡಿ, ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಅವರು ಶೋಷಿತ ಸಮುದಾಯಗಳ ಆಶಾಕಿರಣವಾಗಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವಂತಹ ಸರಳ, ಸಜ್ಜನ ರಾಜಕಾರಣಿ ಎಂದರು.

ಅವರು ತಮ್ಮ ಹುಟ್ಟುಹಬ್ಬವನ್ನು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ನಿರಂತರವಾಗಿ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ತಮ್ಮ ವ್ಯಕ್ತಿತ್ವದಲ್ಲಿ ಆದರ್ಶವನ್ನು ಅಳವಡಿಸಿಕೊಂಡವರು. ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗ ದೀಪ ಅಂಧ ಮತ್ತು ಕಿವುಡು ಮಕ್ಕಳ ಶಾಲೆಯಲ್ಲಿ ಆಚರಿಸುತ್ತಿರುವುದು ಆದರ್ಶನೀಯ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ.ಕೋಮಲ ಅವರು ಮಾತನಾಡಿ, ಬಡವರು, ಶೋಷಿತರ ಪರವಾಗಿ ಚಿಂತಿಸುವ, ನೊಂದವರ ನೋವುಗಳಿಗೆ ಸ್ಪಂದಿಸುವ ಗುಣವಿರುವ ಶ್ರೀನಿವಾಸ ಪ್ರಸಾದ್ ಅವರಂತಹ ವ್ಯಕ್ತಿತ್ವವನ್ನು ಇಂದಿನ ಮಕ್ಕಳು ಆದರ್ಶವಾಗಿರಿಸಿಕೊಂಡು ಉತ್ತಮವಿದ್ಯಾಭ್ಯಾಸ ಮಾಡುವ ಮೂಲಕ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುವಂತಾಗಬೇಕು ಎಂದು ತಿಳಿಸಿದರು.

ಚಾಮರಾಜನಗರದ ಸಾವಿತ್ರಿ ಆಶ್ರಮದಲ್ಲಿ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯದ ಪಿ.ಎಂ.ಇ.ಬಿ ನಿರ್ದೇಶಕರಾದ ಡಾ.ಸಿದ್ದರಾಜು ವಿ.ಜಿ, ಸಂಶೋಧಕರಾದ ದೊರೈರಾಜು, ದೀಪ ಅಕಾಡೆಮಿಯ ಶಿಕ್ಷಕಿಯಾದ ಜ್ಯೋತಿ ಹಾಗೂ ಶ್ರೀನಿವಾಸ ಪ್ರಸಾದ್ ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *