ಚಾಮರಾಜನಗರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಖಾಲಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಸಂಬಂಧ ಜಿಲ್ಲಾಧಿಕಾರಿಯವರಾದ ಎಸ್. ಪೂವಿತಾ ಅವರು ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಜುಲೈ ೧೨ ಕೊನೆಯ ದಿನವಾಗಿದೆ. ಜುಲೈ ೧೩ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಜುಲೈ ೧೫ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಜುಲೈ ೨೩ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ನಡೆಸಲಾಗುತ್ತದೆ. ಮರುಮತದಾನದ ಅವಶ್ಯವಿದ್ದರೆ ಜುಲೈ ೨೫ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ. ಜುಲೈ ೨೬ರಂದು ಬೆಳಿಗ್ಗೆ ೮ ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮ ಪಂಚಾಯಿತಿಯ ಚಾಟೀಪುರ (ಅನುಸೂಚಿತ ಪಂಗಡ ಮಹಿಳೆ), ಹೆಗ್ಗೋಠಾರ ಗ್ರಾಮ ಪಂಚಾಯಿತಿಯ ಹೆಗ್ಗೊಠಾರ ಕ್ಷೇತ್ರ (ಸಾಮಾನ್ಯ ಮಹಿಳೆ), ಹರವೆ ಗ್ರಾಮ ಪಂಚಾಯಿತಿಯ ಕೇತಹಳ್ಳಿ (ಅನುಸೂಚಿತ ಜಾತಿ ಮಹಿಳೆ), ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿಯ ಯರಕನಗದ್ದೆ ಪೋಡು (ಅನುಸೂಚಿತ ಪಂಗಡ), ಗೌಡಹಳ್ಳಿ ಗ್ರಾಮ ಪಂಚಾಯಿತಿಯ ಟಿ. ಹೊಸೂರು (ಅನುಸೂಚಿತ ಜಾತಿ ಮಹಿಳೆ) ಹಾಗೂ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಯ ಲಕ್ಕರಸನಪಾಳ್ಯ (ಅನುಸೂಚಿತ ಜಾತಿ ಮಹಿಳೆ), ಲಕ್ಕರಸನಪಾಳ್ಯ (ಸಾಮಾನ್ಯ) ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ಪೂವಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
