ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ತಾಲೂಕಿನ ವೆಂಕಟಯ್ಯನಛತ್ರ ಹಾಗೂ ಬಿಸಲವಾಡಿ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಮಂಗಳವಾರ (ಸೆ.೧೨) ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರೋಗ್ಯ ಕೇಂದ್ರದ ಕೊಠಡಿಗಳು, ಸ್ವಚ್ಚತೆ, ಔಷಧ ವಿತರಣೆ, ಸಿಬ್ಬಂದಿ ಕರ್ತವ್ಯಗಳ ಬಗ್ಗೆ ವಿವರವಾಗಿ ಪರಿಶೀಲಿಸಿದರು. ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ನೀಡಬೇಕು. ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಔಷಧಗಳನ್ನು ಕಾಲಕಾಲಕ್ಕೆ ತರಿಸಿಕೊಳ್ಳಬೇಕು. ಔಷಧಗಳ ಕೊರತೆ ಇರಬಾರದು. ರೋಗಿಗಳಿಗೆ ಆರೋಗ್ಯ ಕೇಂದ್ರದಲ್ಲೇ ಉಚಿತವಾಗಿ ಔಷಧ ವಿತರಣೆ ಮಾಡಬೇಕೆಂದು ನ್ಯಾಯಾಧೀಶರು ಸೂಚನೆ ನೀಡಿದರು.
ಕೇಂದ್ರದಲ್ಲಿ ಸಾಕಷ್ಟು ಸ್ಥಳವಕಾಶ ಇರುವುದರಿಂದ ಉತ್ತಮ ಪರಿಸರಕ್ಕಾಗಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮತ್ತಷ್ಟು ನೈರ್ಮಲ್ಯ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಆರೋಗ್ಯ ಕೇಂದ್ರದಲ್ಲಿ ನೀಡಲಾಗುತ್ತಿರುವ ವೈದ್ಯಕೀಯ ಸೌಲಭ್ಯಗಳು ಹಾಗೂ ಚಿಕಿತ್ಸೆ ಬಗ್ಗೆ ರೋಗಿಗಳು ಹಾಗೂ ಅವರ ಸಂಬಂಧಿಕರಿಂದ ಕೇಳಿ ತಿಳಿದುಕೊಂಡರು. ಕುಂದು ಕೊರತೆಗಳನ್ನು ಆಲಿಸಿದರು. ಕಾನೂನು ನೆರವು ಅಗತ್ಯವಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸುವಂತೆ ಸಲಹೆ ಮಾಡಿದರು.
ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ತುರ್ತಾಗಿ ಸ್ಪಂದಿಸಬೇಕು. ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಹಿರಿಯ ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ನ್ಯಾಯಾಧೀಶರಾದ ಎಂ. ಶ್ರೀಧರ ಅವರು ತಿಳಿಸಿದರು.
ವೈದ್ಯರಾದ ಡಾ. ಗೋವಿಂದರಾಜು, ಪಲ್ಲವಿ, ಇತರರು ಈ ಸಂದರ್ಭದಲ್ಲಿ ಇದ್ದರು.