ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಶ್ರೇಷ್ಠ ಸಂಸ್ಥೆ

ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಶ್ರೇಷ್ಠ ಸಂಸ್ಥೆಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ ವಿಶ್ವೇಶ್ವರಯ್ಯನವರ ಕೊಡುಗೆಯೆ ಕನ್ನಡ ಸಾಹಿತ್ಯ ಪರಿಷತ್ತು. ವಿದ್ಯಾರ್ಥಿಗಳಲ್ಲಿ ಕನ್ನಡ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ತಿಳಿಸುವ ಅಭಿಯಾನವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡಿರುವುದು ಉತ್ತಮ ಕಾರ್ಯವೆಂದು ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಶ್ರೀಮತಿ ಅಶ್ವಿನಿ ತಿಳಿಸಿದರು.

ಅವರು ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕನ್ನಡ ಸಂಸ್ಕೃತಿ, ಪರಂಪರೆ ಅಭಿಯಾನ ಹಾಗೂ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮದಿನವನ್ನು ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿರುವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ ಎನ್ ಋಗ್ವೇದಿ ವಹಿಸಿ ಮಾತನಾಡಿ, ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಸಂಸ್ಥಾನದ ೨೫ನೇ ಹಾಗೂ ಕೊನೆಯ ಮಹಾರಾಜರು. ಕನ್ನಡ ಭಾಷೆಯಲ್ಲಿ ಕೊರತೆ ಇದ್ದ ಸಂದರ್ಭದಲ್ಲಿ ಸರಳ ಭಾಷೆಯಲ್ಲಿ ಸಮಗ್ರವಾಗಿ ಕನ್ನಡ ಅನುವಾದ ಮಾಡಿಸಿ ಸಾಮಾನ್ಯ ಜನರಿಗೂ ಅನುಕೂಲವಾಗಲು ಪುಸ್ತಕಗಳನ್ನು ನೀಡಿದವರು. ಜಯ ಚಾಮರಾಜೇಂದ್ರ ಒಡೆಯರ್ ಅವರು ಸಾಹಿತ್ಯ ಪ್ರೇಮಿಗಳಾಗಿದ್ದು, ಓದುಗರು ಮತ್ತು ಬರಹಗಾರರು ಆಗಿದ್ದರು. ಸಂಗೀತ, ಸಾಹಿತ್ಯ, ಕಲೆ ವಾಸ್ತುಶಿಲ್ಪದ ಪ್ರೋತ್ಸಾಹಕರಾಗಿದ್ದರು. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದವನ್ನು ಮಾಡಿಸಿ ಪುಸ್ತಕಗಳನ್ನು ಪ್ರಕಟಿಸಿದ ಶ್ರೇಷ್ಠ ವ್ಯಕ್ತಿಯಾಗಿದ್ದರು. ತತ್ವಜ್ಞಾನಿ, ಸಂಗೀತಗಾರ, ಆಡಳಿತಗಾರ, ಚಿಂತಕ, ಉತ್ತಮ ಕಲಾವಿದರಿಗೆ, ಶಿಕ್ಷಣ ಪ್ರೇಮಿ, ಸಾಹಿತಿಗಳಿಗೆ ,ವಿದ್ವಾಂಸರಿಗೆ ಹಾಗೂ ಕ್ರೀಡಾಪಟುಗಳಿಗೆ ಆಶ್ರಯದಾತರು ಆಗಿದ್ದರು. ಮೈಸೂರು ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಲು ಒಪ್ಪಿದ ಮೊದಲ ಆಡಳಿತಗಾರರಾಗಿದ್ದರು. ಇವರ ಸ್ಮರಣೆ ನಮ್ಮೆಲ್ಲರ ಪುಣ್ಯವೆಂದರು. ವಿದ್ಯಾರ್ಥಿನಿಯರು ಉತ್ತಮ ವ್ಯಾಸಂಗ ಮಾಡಿ ಶಿಕ್ಷಣ ಪಡೆದು ಶ್ರೇಷ್ಠ ವ್ಯಕ್ತಿಗಳಾಗಿ . ಕುಟುಂಬಕ್ಕೆ ಗೌರವವನ್ನು ತನ್ನಿ .ತಂದೆ ತಾಯಿಗಳನ್ನು ಗೌರವಿಸಿ ರಾಷ್ಟ್ರಕ್ಕಾಗಿ ದುಡಿಯುವ ಮನಸ್ಸನ್ನು ಬೆಳೆಸಿಕೊಳ್ಳಿ ಎಂದರು.

ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ ಅಧ್ಯಕ್ಷರಾದ ಆರ್ ವಿ ಮಹದೇವಪ್ಪ ಮಾತನಾಡಿದರು.

ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ್ ನಾಗ್ ಹರದನಹಳ್ಳಿ ಮೈಸೂರು ಒಡೆಯರ ಹಾಗೂ ಕನ್ನಡ ಗೀತೆಗಳು ಹಾಡಿ ರಂಜಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ರವಿಚಂದ್ರ ಪ್ರಸಾದ್ ಕಹಳೆ, ಬಿಕೆ ಆರಾಧ್ಯ ,ಸರಸ್ವತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *