ಮೈಸೂರು: ಪ್ರಸ್ತುತ ದಿನಮಾನದ ಸಂದರ್ಭವನ್ನು ಗಮನಿಸಿದರೆ ಸುಸಂಸ್ಕೃತ ಸಮಾಜ ನಿರ್ಮಾಣದ ಅಗತ್ಯತೆ ತುಂಬಾ ಇದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ.ರಾಜೇಂದ್ರರವರು ತಿಳಿಸಿದರು.
ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಗುರುವಾರ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಂಚಲ ಮನಸುಗಳೇ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ ಸಂಸ್ಕಾರಯುಕ್ತ ಜೀವನ ಸಾಗಿಸುವುದನ್ನು ಹೇಳಿಕೊಡಬೇಕು. ಅದಕ್ಕೆ ಪ್ರಶಸ್ತವಾದ ಕಾಲವೆಂದರೆ ಶ್ರಾವಣ ಮಾಸ, ಗುರುವಿನ ಬೆಂಬಲದೊಂದಿಗೆ ಸುಭದ್ರವಾದ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದರು.
ಸಂಸ್ಕಾರ ಮರೆತಿರುವ ಯುವ ಜನತೆಗೆ ಸದ್ವಿಚಾರಗಳ ಹಾದಿಯನ್ನು ತೋರಬೇಕು. ಅಂತಹ ಕೆಲಸವನ್ನು ಸುತ್ತೂರು ಶ್ರೀಮಠ ಮಾಡುತ್ತಿರುವುದು ಶ್ಲಾಘನೀಯ. ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಭಾರತದ ನಿರ್ಮಾಣದತ್ತ ಹೆಜ್ಜೆಇಡಬೇಕು ಎಂದು ಹೇಳಿದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವ್ಯವಸ್ಥಾಪಕರಾದ ಡಾ.ಪಿ.ಕೆ.ಎಂ.ಪ್ರಶಾಂತ್ರವರು ಮಾತನಾಡಿ, ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಈ ಮಾಸದಂದು ಕೈಗೊಳ್ಳುವ ಪೂಜೆ ಪುನಸ್ಕಾರಗಳಿಗೆ ಫಲ ದೊರೆಯುತ್ತದೆ. ಭಗವಂತ ಭಕ್ತರ ಮನಸ್ಸಿನ ಇಚ್ಚೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಅದೋಗತಿಗೆ ತಲುಪಿರುವ ಜನರನ್ನ ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸಗಳನ್ನು ಮಠಮಾನ್ಯಗಳು ಪುರಾತನ ಕಾಲದಿಂದಲೂ ಮಾಡುತ್ತ ಬರುತ್ತಿವೆಎಂದರು.
ಮರಿಯಾಲ ಶ್ರೀ ಮುರುಘರಾಜೇಂದ್ರ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಭಗವಚ್ಚಿಂತನೆಯನ್ನು ಮಾಡಲು ಶ್ರಾವಣ ಮಾಸ ಸುಸಂದರ್ಭ. ಅಂತರಂಗದಲ್ಲಿ ಭಗವಂತನ ದರ್ಶನ ಮಾಡಿಸಿದವರು ಶರಣರು. ಮಾನವಜನ್ಮ ಸಾರ್ಥಕವಾಗಬೇಕಾದರೆ ಶರಣರ ಸಂದೇಶ, ವಿಚಾರಗಳನ್ನು ಆರ್ಜಿಸಬೇಕು ಎಂದು ತಿಳಿಸಿದರು.
ಡಾ. ಕೆ.ಅನಂತರಾಮುರವರು ಶ್ರಾವಣಕ್ಕೂ – ಶ್ರವಣಕ್ಕೂ ಅವಿನಾಭಾವ ಸಂಬಂಧವಿದೆ. ಈ ಮಾಸದಲ್ಲಿ ಸದ್ವಿಚಾರಗಳ ಚಿಂತನೆ ಮಾಡಿದರೆ ಸಾಲದು, ಬದುಕಿಗೆ ಅವುಗಳನ್ನು ಅಳವಡಿಸಿಕೊಳ್ಳಬೇಕು. ಸುಂಸ್ಕೃತರಾಗಿ ಬೆಳೆಯಲು ಇಂತಹ ಸತ್ಸಂಗಗಳು, ಪ್ರವಚನಗಳು ನಡೆಯುತ್ತಲೇ ಇರಬೇಕು. ಶರೀರವೆಂಬುದು ಎತ್ತಿನ ಬಂಡಿಯಂತೆ, ಈ ಬಂಡಿಗೆ ಆಸೆ-ಆಮಿಷಗಳೆಂಬ ಸರಕು ತುಂಬಲಾಗಿದೆ. ಸದ್ವಿಚಾರದ ಸಂಗತಿಗಳು ಬಂಡಿಯ ಚಕ್ರದ ಕೀಲುಗಳಿಂದ್ದಂತೆ. ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖವನ್ನು ಪಡಬೇಕಾಗಿದೆ. ಬದುಕು ಉತ್ತಮ ಮೌಲ್ಯಗಳಿಂದ ರೂಪಗೊಳ್ಳಬೇಕು ಎಂದು ಹೇಳಿದರು.
ಶ್ರಾವಣ ಮಾಸದ ಪ್ರಯುಕ್ತ ಲಕ್ಕಣ್ಣ ದಂಡೇಶ ವಿರಚಿತ ಶಿವತತ್ತ್ವ ಚಿಂತಾಮಣಿ ಪ್ರವಚನ ನಡೆಯಲಿದೆ. ಮೈಸೂರು ಶ್ರೀ ಸುತ್ತೂರು ಮಠದ ಸಿಬ್ಬಂದಿವರ್ಗದವರು ಸೇವಾರ್ಥ ನೆರವೇರಿಸಿದರು.
ವಿದ್ವಾನ್ ಕೃ. ರಾಮಚಂದ್ರರವರು ವಾಚನ ಮಾಡಿದರು. ಜೆಎಸ್ಎಸ್ ಲಲಿತಕಲಾ ವೃಂದದವರು ಪ್ರಾರ್ಥಿಸಿದರು.ಶ್ರೀ ಎಸ್. ನಂದೀಶ್ ಸ್ವಾಗತಿಸಿದರು. ಶ್ರೀ ಕುಮಾರಸ್ವಾಮಿ ವಿರಕ್ತಮಠ ವಂದಿಸಿದರು. ಶ್ರೀ ಬಿ.ನಿರಂಜನಮೂರ್ತಿ ಕಾರ್ಯಕ್ರಮ ನಿರೂಪಿಸಿದರು.