ಕೋವಿಡ್ ಬಗ್ಗೆ ಭಯ ಬೇಡ ಎಚ್ಚರವಿರಲಿ : ಸಿಮ್ಸ್ ಡೀನ್ ಡಾ. ಮಂಜುನಾಥ್ ಮನವಿ

ಚಾಮರಾಜನಗರ: ಕೋವಿಡ್ ಬಗ್ಗೆ ಭಯ ಬೇಡ ಎಚ್ಚರಿಕೆ ಇರಲಿ, ಹಲವು ಸಲಹೆಗಳನ್ನು ಸಾರ್ವಜನಿಕರು ಪಾಲಿಸಬೇಕೆಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಹೆಚ್.ಜಿ. ಮಂಜುನಾಥ್ ಅವರು ತಿಳಿಸಿದ್ದಾರೆ.

ಜನಸಂದಣಿಯ ಸ್ಥಳಗಳಲ್ಲಿ ಅನಾವಶ್ಯಕವಾಗಿ ಗುಂಪು ಸೇರುವುದು ಸೂಕ್ತವಲ್ಲ, ಜನದಟ್ಟಣೆಯಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಚತೆ ಕಾಪಾಡಬೇಕು. ಅನಾರೋಗ್ಯ ಕಂಡಬಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸೂಕ್ತವಲ್ಲ.

ತಂಪುಪಾನೀಯ ಮತ್ತು ರೆಫ್ರಿಜರೇಟರ್‍ಗಳಲ್ಲಿ ಶೇಖರಿಸಿದ ಆಹಾರವನ್ನು ಸೇವಿಸುವುದು ಸೂಕ್ತವಲ್ಲ. ಗರ್ಭಿಣಿಯರು, ವೃದ್ದರು, ಅನಾರೋಗ್ಯದಿಂದ ಬಳಲುತ್ತಿರುವವರು (ಹೃದ್ರೋಗ, ಕಿಡ್ನಿ ವೈಫಲ್ಯ, ಕ್ಯಾನ್ಸರ್, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ, ನರದೌರ್ಬಲ್ಯ) ಮಾಸ್ಕ್ ಧರಿಸಬೇಕು. ಮಕ್ಕಳು ಯಾವುದೇ ಆತಂಕ ಪಡದೇ ಎಚ್ಚರಿಕೆಯಿಂದ ಇರಬೇಕು. 

ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆಗಳನ್ನು ನಿರ್ಲಕ್ಷಿಸದೇ ತುರ್ತಾಗಿ ವೈದ್ಯರ ಸಲಹೆ ಪಡೆಯಬೇಕು. ಮೊದಲ ಮೂರು ಕೋವಿಡ್ ಅಲೆಗೆ ಹೋಲಿಸಿದರೆ 2025ನೇ ಸಾಲಿನಲ್ಲಿ ಕಂಡು ಬಂದಿರುವ ಕೋವಿಡ್ ತಳಿ ಎನ್.ಬಿ-1.8.1 ಹಾಗೂ ಎಲ್.ಎಫ್-7 ತೀವ್ರ ತೊಂದರೆ ಉಂಟು ಮಾಡುವಂತಹ ತಳಿಯಾಗಿರುವುದಿಲ್ಲ. ಹೀಗಾಗಿ ಈಗ ಕಂಡುಬಂದಿರುವ ಕೋವಿಡ್ ತಳಿಯ ಬಗ್ಗೆ ಆತಂಕ ಪಡದೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಹೆಚ್.ಜಿ. ಮಂಜುನಾಥ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *