ನಗರದ ಸ್ವಚ್ಛತೆಗೆ ಪ್ರತಿಯೊಬ್ಬರು ಸಹಕರಿಸಿ:ಶಾಸಕರಾದ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆಯೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ  ಶಾಸಕರಾದ  ಸಿ.ಪುಟ್ಟರಂಗಶೆಟ್ಟಿ  ಹೇಳಿದರು.

ನಗರದ ಸುಲ್ತಾನ್ ಷರೀಫ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಸಭೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ವರ್ತಕರ ಸಂಘ, ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಚಾಮರಾಜನಗರ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿ ಶನಿವಾರ ಚಾಮರಾಜನಗರದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತಿದೆ. ನಗರದಲ್ಲಿರುವ ಸಾರ್ವಜನಿಕರು ನಗರವನ್ನು ಸ್ವಚ್ಛವಾಗಿಸಲು ಸಹಕರಿಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ಮುಂದಾಗಬೇಕು ಎಂದು ಶಾಸಕರು ಸಲಹೆ ನೀಡಿದರು.

ನಗರಸಭೆ ವತಿಯಿಂದ ವಾರ್ಡ್ ಗಳಲ್ಲಿ ಕಸದ ಡಬ್ಬಿಯನ್ನು ವಿತರಣೆ ಮಾಡಲಾಗುತ್ತಿದ್ದು ನಿವಾಸಿಗಳು ಹಸಿ ಕಸ, ಒಣ ಕಸವನ್ನು ವಿಂಗಡಿಸಿ ನೀಡುವುದರಿಂದ ನಗರದ ಸ್ವಚ್ಛತೆ ಸಾಧ್ಯವಾಗುತ್ತದೆ. ನಗರಸಭೆ ತೆಗೆದುಕೊಳ್ಳುವ ನಿರ್ಣಯಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಸ್ವಚ್ಛತಾ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದ ನಗರಸಭಾ ಅಧ್ಯಕ್ಷರಾದ ಸುರೇಶ್  ಮಾತನಾಡಿ, ನಗರವನ್ನು ಸ್ವಚ್ಛವಾಗಿಡಲು ಜನರು ಸಹಕರಿಸಬೇಕು. ಪರಿಸರ ಸ್ವಚ್ಛವಾಗಿದ್ದರೆ ಉತ್ತಮ  ಆರೋಗ್ಯ ಹೊಂದಲು ಸಾಧ್ಯ. ಜನರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಪೌರಾಯುಕ್ತರಾದ  ಎಸ್.ವಿ.ರಾಮದಾಸ್ ಮಾತನಾಡಿ, ಪ್ರತಿ ಶನಿವಾರ ಸ್ವಚ್ಛ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ಜನರು ಉತ್ಸಾಹದಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಕಲೀಲ್ ಉಲ್ಲಾ, ಮಹಮದ್ ಅಮೀಕ್,ನಾಗರಾಜು, ಸ್ವಾಮಿ, ಜಿಲ್ಲಾ   ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ.ರೇಣುಕಾದೇವಿ, ಸಂಘದ ಪದಾಧಿಕಾರಿಗಳಾದ ಮಹದೇವಸ್ವಾಮಿ, ಪ್ರಕಾಶ್, ಸುಬ್ರಮಣ್ಯ, ವರ್ತಕರ ಸಂಘದ ಪ್ರಕಾಶ್, ಕೈಗಾರಿಕಾ ಉದ್ಯಮ ಸಂಘದ ಅಧ್ಯಕ್ಷರಾದ ವಿ.ಪ್ರಭಾಕರ್, ಜಯಸಿಂಹ, ರೋಟರಿ ಅಧ್ಯಕ್ಷರಾದ ನಾಗರಾಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *