ಎಳ್ಳಿನ ಎಣ್ಣೆಯಂತೆ ಸುಜ್ಞಾನದ ಹಣತೆ ಹೃದಯದಿ ಬೆಳಗಿ ದೂರಾಗಲಿ ಕತ್ತಲು, ಬೆಲ್ಲದ ಸವಿಯಂತೆ ಆಡುವ ಮಾತಿರಲಿ, ಅಬ್ಬರದಿ ಗೊಬ್ಬರವಾಗದೆ ಬದುಕು ಕೊಬ್ಬರಿಯಂತಿರಲಿ, ಸಕ್ಕರೆಯ ಅಚ್ಚಿನಂತೆ ಸ್ವಚ್ಚ ನಗುವಿರಲಿ, ಕಬ್ಬಿನಿ ಕಬ್ಬದಂತೆ ಸಕಾರ್ಯ ಸಾಗುತಿರಲಿ .
ಬೆಳ್ಳಿ ಬಟ್ಟಲೊಳಗೆ ಹೊನ್ನ ರಶ್ಮಿಯ ಮಾಯೇ,
ಹರಿಯುತ್ತಿರೆ ಇಳೆಯಲಿ ಬೆಳಕಿನ ಛಾಯೇ,
ಎಲ್ಲೆಲ್ಲು ಸಂಭ್ರಮ, ಸಡಗರದ ಹಾಲ್ಜರಿ ನಗೆಯ ಹೊನಲಲಿ ನಲಿದಾಡುತಿಹಳು ಭೂತಾಯೇ ಇಬ್ಬನಿ ಜಾರುವ ಮುನ್ನ “ತೆಗೆದುಕೊಳ್ಳಿ ಎಳ್ಳು ಬೆಲ್ಲ ತಿಂದು ನಾಕು ಒಳ್ಳೇ ಮಾತಾಡಿ’ ಇಂದು ಸಂಕ್ರಾಂತಿ.
ನಾವು ಹಿಂದೂಗಳು ಮಾಡುವೆವು ಪ್ರತಿ ವರ್ಷದ ಜನವರಿಯಲಿ ಮೊದಲ ಹಬ್ಬವಾಗಿ ಸಂಕ್ರಾಂತಿ, ನಾವೂ ಹಿಂದೂಗಳೇ ಆದರೇನು ಮಾಡುವುದು ನಮ್ಮ ಮನೆ ಮನದಲ್ಲಿ ಪ್ರತಿನಿತ್ಯವೂ ನಡೆಯುವುದು ಸಂ-ಕ್ರಾಂತಿ.
ಎದೆಯಾಳದಲ್ಲಿ ನೂರು ನೋವಿರಲಿ, ಕಷ್ಟಗಳು ಕೈ ಬೀಸಿ ಕರೆದರು ಇದ್ದು ಬಿಡಲಿ ಮನವು ನಿಶ್ಚಿಂತೆಯಲಿ, ಧೈರ್ಯಗೆಡುವುದೇಕೆ-ಕುಗ್ಗಿ ಕರಗುವುದೇಕೆ, ಸುಗ್ಗಿಯು ಬಂದಿದೆ ಹಿಗ್ಗನು ತಂದಿದೆ,
ಮೈ ಮನಗಳು ಕುಣಿದು ಕುಪ್ಪಳಿಸಿವೆ, ಜಾನುವಾರಗಳು ಹಚ್ಚಿದ ಕಿಚ್ಚಲ್ಲಿ ನೆಗೆದಾಡಿವಿ, ಗರಿಮುರಿಯ ಜರಿಲಂಗ ತೊಟ್ಟು-ಶುಭ್ರತೆಯ ಉಡುಪಿನಲಿ ಹಿಗ್ಗಿವೆ ಕಂದಮ್ಮಗಳು, ಎಳ್ಳು ಬೆಲ್ಲವ ತಿಂದು, ಭಕ್ಷ್ಯಭೋಜನಗಳ ಉಂಡು ಸಂಕ್ರಾಂತಿ ಆಚರಿಸಿ ಬೆಚ್ಚಗಿರಲಿ ಎಲ್ಲರ ಮನಗಳು.

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಉಪನ್ಯಾಸಕ
ಹಾಗೂ ಹವ್ಯಾಸಿ ಬರಹಗಾರ, ಮೈಸೂರು.
ದೂರವಾಣಿ: 7795862281