ಅರ್ಥಪೂರ್ಣವಾಗಿ ನಡೆದ ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯ ಸ್ಮರಣೆ

ಚಾಮರಾಜನಗರ: ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 40ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವು ನಗರದಲ್ಲಿಂದು ಅರ್ಥಪೂರ್ಣವಾಗಿ ನಡೆಯಿತು.

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ದೀಪ ಬೆಳಗಿಸಿ ಡಾ. ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. 

  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಬಾಬು ಜಗಜೀವನ ರಾಮ್ ಅವರು ಕೃಷಿ ಸಚಿವರಾಗಿ ನೂತನÀ ತಂತ್ರಜ್ಞಾನವನ್ನು ಅಳವಡಿಸಿ ದೇಶದಲ್ಲಿ ಹಸಿರು ಕ್ರಾಂತಿಯ ಮೂಲಕ ಆಹಾರ ಸ್ವಾವಲಂಬನೆ ಸಾಧಿಸಿದರು. ಕಾರ್ಮಿಕ, ರಕ್ಷಣೆ ಸೇರಿದಂತೆ ಹಲವಾರು ಮಹತ್ವದ ಖಾತೆಗಳನ್ನು ನಿರ್ವಹಿಸಿ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದರು ಎಂದರು.

  ಡಾ. ಬಾಬು ಜಗಜೀವನ ರಾಮ್ ಅವರು ಸುಧೀರ್ಘ ಕಾಲ ಸಂಸತ್ ಸದಸ್ಯರಾಗಿದ್ದರು. ಇದು ದಾಖಲೆಯಾಗಿದೆ. ಅಲ್ಲದೆ ಅತಿ ಹೆಚ್ಚು ಕಾಲ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಾಬುಜಿ ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಅವರ ತತ್ವ, ಆದರ್ಶ, ಸಾಧನೆಗಳು ನಮ್ಮೆಲ್ಲರಿಗೂ ಮಾರ್ಗದರ್ಶನವಗಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರು ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. 

   ಇದೇ ಸಂದರ್ಭದಲ್ಲಿ ಮುಖಂಡರಾದ ಬಸವನಪುರ ರಾಜಶೇಖರ್ ಅವರು ಮಾತನಾಡಿ ಬಾಬು ಜಗಜೀವನ ರಾಮ್ ಅವರು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕಾರ್ಮಿಕ ಮಂತ್ರಿಗಳಾಗಿದ್ದ ಕಾಲದಲ್ಲಿ ಕಾರ್ಮಿಕರ ಭದ್ರತೆಗಾಗಿ ವಿಮೆ ಸೌಲಭ್ಯವನ್ನು ಜಾರಿಗೆ ತಂದರು. ಮುಂಬಡ್ತಿಯ ಸೌಲಭ್ಯವು ಸಹ ಇವರ ಅವಧಿಯಲ್ಲಿಯೇ ಅನುಷ್ಠಾನವಾಯಿತು.  ರಕ್ಷಣಾ ಮಂತ್ರಿಯಾಗಿ ಅನೇಕ ಗಮನಾರ್ಹ ಸಾಧನೆ ಕಾರ್ಯಗಳನ್ನು ಮಾಡಿದ್ದಾರೆ. ಆಹಾರ ಭದ್ರತೆಗಾಗಿ ತಂದ ಹಸಿರುಕ್ರಾಂತಿಯ ಹರಿಕಾರರು ಬಾಬುಜಿ ಯಾಗಿದ್ದಾರೆ ಎಂದರು. 

   ಜಾನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ ಡಾ. ಬಾಬು ಜಗಜೀವನ ರಾಮ್ ಅವರ ಕುರಿತು ಗೀತ ಗಾಯನ ಪ್ರಸ್ತುತಪಡಿಸಿದರು. 

   ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಸಮುದಾಯ, ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು. 

   ಇದಕ್ಕೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ಪುತ್ಥಳಿಗೆ ಜಿಲ್ಲಾಧಿಕಾರಿ ಶ್ರೀರೂಪ, ಗಣ್ಯರು ಮಾಲಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *