ಮೈಸೂರು: ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ವಾತಾವರಣವನ್ನು ಸೃಷ್ಟಿಸಬೇಕು. ಇದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳಿದರು.
ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮನ್ವಯ- ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಸಂಭ್ರಮ ಕರ್ನಾಟಕ 50 “ಕರ್ನಾಟಕ ಸಾಂಸ್ಕೃತಿಕ ಮುನ್ನೋಟ:ಚಿಂತನಾ ಸಮಾವೇಶ”ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಕರ್ನಾಟಕದಲ್ಲಿ ಯಾವ ಭಾಷೆಯನ್ನಾದರೂ ಬಳಸಿ ಬದುಕಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೇ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಹಾಗೂ ಅಗ್ರಭಾಷೆ ಹಾಗಾಗಿ ಅನ್ಯರಾಜ್ಯ, ವಿದೇಶದಿಂದ ಬಂದoತವರು ಕನ್ನಡವನ್ನು ಕಡ್ಡಾಯವಾಗಿ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡವು ಕೆಲವೇ ಜನರದ್ದಾಗದೆ ಏಳು ಕೋಟಿ ಕನ್ನಡಿಗರ ಉಸಿರಾಗಬೇಕು. ಕನ್ನಡವನ್ನು ಕಲಿಯಲು ಮರೆಯಬಾರದು ಕನ್ನಡವನ್ನು ಮಾತನಾಡಲು ಬಿಡಬಾರದು ಎಂಬ ಸಾಲಿನ ಸಾರಾಂಶವನ್ನು ಪಾಲಿಸಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಬದುಕನ್ನು ಕಟ್ಟಿಕೊಂಡವರು, ಅನ್ಯ ಭಾಷಿಗರು, ಕನ್ನಡವನ್ನು ಮಾತನಾಡುವವರಾಗಬೇಕು. ನಾವು ಯಾವುದೇ ಭಾಷೆಯನ್ನು ದ್ವೇಷಿಸುವುದಿಲ್ಲ. ಎಲ್ಲಾ ಭಾಷೆಯನ್ನು ಕಲಿಯಬೇಕು ಆದರೇ ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಬೇರೆ ರಾಜ್ಯದ ಜನರಂತೆ ನಾವು ನಮ್ಮ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದ ನಾವು, ಕನ್ನಡ ನಾಡು ನುಡಿಗೆ ನಮ್ಮದೇ ಅದ ಕೊಡುಗೆಯನ್ನು ನೀಡಿ ಬೆಳಸಬೇಕು ಎಂದು ಹೇಳಿದರು.
ಡಿ.ದೇವರಾಜ ಅರಸು ಅವರು 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ನಾಮಕರಣ ಕಳೆದ ವರ್ಷಕ್ಕೆ 50 ವರ್ಷ ಪೂರೈಸಿದ್ದು, ಅಂದಿನ ಸರ್ಕಾರ ಸಂಭ್ರಮಾಚರಣೆಯನ್ನು ಮಾಡಬೇಕಿತ್ತು. ಕಾರಣಾಂತರಗಳಿoದ ನಡೆಯದ ಕಾರಣ ಇಂದು ನಮ್ಮ ಸರ್ಕಾರ ಸಂಭ್ರಮಾಚರಣೆ ಮಾಡಬೇಕೆಂದು 2023-24 ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಿ ಇಂದು ಅದನ್ನು ಕನ್ನಡ ಜನೋತ್ಸವವಾಗಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪನವರು ಮಾತನಾಡಿ, ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷಗಳನ್ನು ಪೂರೈಸಿದ್ದು, ಈ ಸಂಭ್ರಮಾಚಾರಣೆಯನ್ನು ಜನರ ಸಾಂಸ್ಕೃತಿಕ ಮುನ್ನೊಟವನ್ನಾಗಿ ಮಾಡಲು ಸರ್ಕಾರವು 4 ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ ಎಂದು ಮಾಹಿತಿ ನೀಡಿದರು.
ಕನ್ನಡದ ಸಾಹಿತ್ಯ ಹಾಗೂ ಸಂಸ್ಕೃತಿಯ ಪರಂಪರೆಯು ದೊಡ್ಡದಿದ್ದು, ಸಾಂಸ್ಕೃತಿಕ ನಾಯಕನಾದ ಬಸವಣ್ಣನವರಿಂದ ಕುವೆಂಪು, ಕಾರಂತರoತಹ ಮಹಾನ್ ಸಾಹಿತಿಗಳು ಕೊಡುಗೆ ನೀಡಿದ್ದಾರೆ. ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿ, ಅವೈಜ್ಞಾನಿಕ ಮತ್ತು ಮೂಡನಂಬಿಕೆಗಳನ್ನು ಧಿಕ್ಕರಿಸಿ ಜನರಿಗೆ ನಿಜವಾದ ಸಂಸ್ಕೃತಿಯನ್ನು ತಿಳಿಸಲು ಮುಂದಾಗಿದ್ದರು ಎಂದರು.
ಜಾತಿ ವ್ಯವಸ್ಥೆ, ಧರ್ಮಾಧಾರಿತ ಪ್ರಾಬಲ್ಯವನ್ನು ಹೋಗಲಾಡಿಸಲು ನಮ್ಮ ನಾಡಿನ ಹಿರಿಯರು ಕಾಲಕಾಲಕ್ಕೆ ಸಂಸ್ಕೃತಿಯ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಇಂದಿನ ಕವಿಗಳು ಮತ್ತು ಸಾಹಿತಿಗಳು ತಮ್ಮ ಸಾಹಿತ್ಯದ ಶ್ರೀಮಂತ ಬೇರನ್ನು ಹೆಚ್ಚಿನ ಜನರಿಗೆ ತಲುಪಿಸಿ, ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಅಭಿವೃದ್ಧಿಯ ಬೆಳಕನ್ನು ತರಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ.ಎಸ್.ತಂಗಡಗಿ ಅವರು ಮಾತನಾಡಿ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ ಇತಿಹಾಸ ಬರೆದಂತಹ ಕ್ಷಣಕ್ಕೆ ಇಂದು 50 ವರ್ಷ ತುಂಬಿದೆ. ಅಂದು ನಾಮಕರಣ ಮಾಡಿದ ಮಾದರಿಯಲ್ಲಿಯೇ ಇಂದು 50 ವರ್ಷದ ಸಂಭ್ರಮಾಚಾರಣೆಯನ್ನು ಮಾಡಲಾಗುತ್ತಿದ್ದು,ಸುವರ್ಣ ಸಂಭ್ರಮ ಕರ್ನಾಟಕದ ರಥವನ್ನು ನಿರ್ಮಿಸಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮೆರವಣಿಗೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಂದು ಏರ್ಪಡಿಸಲಾಗಿರುವ ಸಮಾವೇಶಕ್ಕೆ ಬಂದಿರುವoತಹ ಸಾಹಿತಿಗಳು ತಮ್ಮ ಸಲಹೆ ಹಾಗೂ ನಿರ್ಧಾರಗಳನ್ನು ನೀಡುವುದರ ಮೂಲಕ ಸಂಭ್ರಮಾಚರಣೆಯನ್ನು ಇನ್ನಷ್ಟು ಮೆರಗುಗೊಳಿಸಬೇಕು. ಅಲ್ಲದೆ ಚಿಂತನಾ ಸಮಾವೇಶವು ಪ್ರತಿಯೊಬ್ಬರಿಗೂ ಉಪಯುಕ್ತವಾಗುವಂತೆ ಮಾಡಬೇಕು ಎಂದರು.
ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮದ ಅರ್ಥವು ಅನ್ಯ ರೂಪತಾಳಿ ಗಲಭೆಗಳ ಸೃಷ್ಟಿಗೆ ಕಾರಣವಾಗುತ್ತಿದೆ. ಸಾಹಿತಿಗಳು ಕವಿಗಳಾದ ನೀವು ಅವುಗಳನ್ನು ಹೋಗಲಾಡಿಸಲು ಮುಂದಾಗಿ, ಎಲ್ಲಾ ಜನರಲ್ಲೂ ಸಮರಸ್ಯವನ್ನು ಮೂಡಿಸಿ ಅಭಿವೃದ್ಧಿಯ ಲೇಪನವನ್ನು ಹಚ್ಚಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಉಪಾಧ್ಯಕ್ಷರಾದ ಪುಷ್ಪ ಅಮರ್ ನಾಥ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ. ಶರಣಪ್ಪ ವಿ ಹಲ್ಸೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ, ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಕಾ. ತ.ಚಿಕ್ಕಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ್ ಸೇರಿದಂತೆ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.