
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಾಮನೂರು ಶಿವಶಂಕರಪ್ಪ ವಿರುದ್ದ ಹೇಳಿಕೆ ನೀಡುವ ಯೋಗ್ಯತೆ, ಅರ್ಹತೆ ವಿಶ್ವನಾಥಗೆ ಇಲ್ಲ
ಚಾಮರಾಜನಗರ: ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಪಕ್ಷದ ಶಿಸ್ತು ಹಾಗೂ ಸಿದ್ದಾಂತಗಳನ್ನು ರೂಡಿಸಿಕೊಂಡಿರುವ ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಹಾಗು ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಶಾಮನೂರು ಶಿವಶಂಕರಪ್ಪ ಅವರ ವಿರುದ್ದ ಮಾತನಾಡುವ ಅರ್ಹತೆ ಮತ್ತು ಯೋಗ್ಯತೆ ಪಕ್ಷಾಂತರಿ ಹಾಗೂ ಅವಕಾಶವಾದಿ ರಾಜಕಾರಣಿ ವಿಶ್ವನಾಥ್ಗೆ ಇಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ತೀವ್ರವಾಗಿ ಖಂಡಿಸಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ಹಿರಿಯರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರ್ ಅವರು ಕಾಂಗ್ರೆಸ್ ಪಕ್ಷದ ಹಿರಿಯರು, ಅಲ್ಲದೇ ಪಕ್ಷದ ಆಧಾರ ಸ್ತಂಭವು ಕೂಡ. ಇಂಥವರ ವಿರುದ್ದ ಮಾತನಾಡುವಾಗ ಎಚ್. ವಿಶ್ವನಾಥ್ ತಾವು ಏನೂ ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು. ಒಂದು ಕಾಲದಲ್ಲಿ ಸಿಎಂ ಸಿದ್ದರಾಮಯ್ಯ ನವರ ಕಿರುಕುಳಕ್ಕೆ ಬೇಸತ್ತು, ಕಾಂಗ್ರೆಸ್ ಪಕ್ಷದಲ್ಲಿದ್ದು ಎಲ್ಲಾ ಅಧಿಕಾರವನ್ನು ಅನುಭವಿಸಿ, ಪಕ್ಷ ತೊರೆದವರು. ಅಲ್ಲಿಂದ ಬಿಜೆಪಿ, ಜೆಡಿಎಸ್ ಸೇರಿ ಅಲ್ಲಿಯು ಸಹ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ದರಾಗದೇ ಅಧಿಕಾರಕ್ಕಾಗಿ ಹಾಗೂ ಬಾಯಿ ಚಪಲಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡಿ, ಹಳ್ಳಿ ಹಕ್ಕಿಯಂತೆ ಊರೂರು ತಿರುಗಿ ಮತ್ತೇ ಗೂಡು ಸೇರಿರುವ ವಿಶ್ವನಾಥ್ ಅವರು ಮತ್ತೊಬ್ಬರ ಬಗ್ಗೆ ಮಾತನಾಡುವಾಗುವ ಹತ್ತು ಬಾರಿ ಯೋಚಿಸುವುದು ಒಳಿತು. ಈ ಹಿಂದೆ ಬಿಜೆಪಿಯಲ್ಲಿದ್ದು ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್ ಪರವಾಗಿ ಮಾತನಾಡುವಾಗ ನೈತಿಕತೆ, ಪಕ್ಷ ನಿಷ್ಟೆ ಎಲ್ಲಿ ಹೋಗಿತ್ತು ಎಂದು ನಂದೀಶ್ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಮುಂದೆ ಹಿರಿಯರಾದ ಶಿವಶಂಕರಪ್ಪ ವಿರುದ್ದ ಹೇಳಿಕೆ ನೀಡಿದರೆ ಮಹಾಸಭಾದಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮೂಡ್ಲುಪುರ ನಂದೀಶ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.