ದರ್ಶನ್ ಸಿನಿಮಾಗಳ ಸಿಡಿಗಳನ್ನು ಸುಟ್ಟು ಆಕ್ರೋಶ
ದರ್ಶನ್ ಅಸ್ತಿ ಮುಟ್ಟುಗೋಲು ಹಾಕಿ, ಅರ್ಧ ಅಸ್ತಿಯನ್ನು ರೇಣುಕಾಸ್ವಾಮಿ ಕುಟುಂಬಕ್ಕೆ ನೀಡಿ : ನಾಗೇಂದ್ರ ಡಿ. ಒತ್ತಾಯ
ಚಾಮರಾಜನಗರ: ಚಿತ್ರದುರ್ಗದ ವೀರಶೈವ ಲಿಂಗಾಯತ ಸಮಾಜದ ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರವೆ ಮಠದ ಶ್ರೀ ಸರ್ಪ ಭೂಷಣಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ನಗರ ಮಠದ ಶ್ರೀ ಚೆನ್ನಬಸವಸ್ವಾಮಿಗಳ ನೇತೃತ್ವದಲ್ಲಿ ಮೆರವಣಿಗೆ ಹೊರಟರು. ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಧರಣಿ ನಡೆಸಿದರು. ದರ್ಶನ್ ಮತ್ತು ಗ್ಯಾಂಗ್ಗೆ ಉಗ್ರ ಶಿಕ್ಷೆಯಾಗಲಿ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕಲ್ಪಿಸಿ, ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ದರ್ಶನ್ನನ್ನು ಚಲನಚಿತ್ರ ರಂಗದಿಂದ ಬ್ಯಾನ್ ಮಾಡಿ ಘೊಷಣೆ ಜೊತೆಗೆ ಕರ್ನಾಟಕ ಪೊಲೀಸ್ ಇಲಾಖೆಗೆ ಜಯಕಾರ ಕೂಗಿ, ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.

ದರ್ಶನ್ ನಟನೆಯ ಸಿನಿಮಾದ ಸಿಡಿಗಳನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲ ಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮುಖಾಂತರ ಸಿಎಂ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೂವರು ಶ್ರೀಗಳು, ರೇಣುಕಾಸ್ವಾಮಿ ಹತ್ಯೆ ಮಾಡಿರುವುದು ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಪ್ರಸಿದ್ದ ನಟನಾಗಿ, ತನ್ನ ಗ್ಯಾಂಗ್ನೊಂದಿಗೆ ಸೇರಿಕೊಂಡು ದರ್ಶನ್ ವಿಕೃತಿ ಮೆರೆದು ಆತನನ್ನು ಕೊಲೆ ಮಾಡಿರುವುದು ಖಂಡನೀಯ. ಪೊಲೀಸರು ಕೊಲೆಯನ್ನು ಭೇದಿಸಿ ಯಾವುದೇ ಒತ್ತಡಕ್ಕು ಮಣಿಯಾದೇ ದರ್ಶನ್ ಅನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಸೂಕ್ತ ಸಾಕ್ಷಿಗಳನ್ನು ದಾಖಲು ಮಾಡಿ, ಉಗ್ರ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೋಗಾಪುರ ನಾಗೇಂದ್ರ ಮಾತನಾಡಿ, ದರ್ಶನ್ ಹಣದ ದರ್ಪ ಹಾಗೂ ನಾನು ದೊಡ್ಡ ನಟ ಎಂಬ ಅಹಂನಿಂದ ಅಮಾಯಕ ರೇಣುಕಾಸ್ವಾಮಿ ಹತ್ಯೆ ಮಾಡಿದ್ದು, ಆತನ ಕುಟುಂಬ ಬೀದಿಗೆ ಬಿದ್ದಿದೆ. ಆತನ ಪತ್ನಿ ಐದು ತಿಂಗಳ ಗರ್ಭೀಣಿಯಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸರ್ಕಾರ ಕೂಡಲೇ ದರ್ಶನ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅರ್ಧ ಭಾಗವನ್ನು ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.

ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್,ಮುಖಂಡ ಆಲೂರು ಮಲ್ಲು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ನೇಹಾ ಹತ್ಯೆಯಾಗಿತ್ತು. ಈಗ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಚಲನಚಿತ್ರ ನಟ ದರ್ಶನ್ ಮತ್ತು ಗ್ಯಾಂಗ್ ಅಮಾನುಷವಾಗಿ ಹತೆÀ್ಯ ಮಾಡಿದೆ. ಇವರಿಗೆ ಕೂರ್ರ ಶಿಕ್ಷೆಯಾಗಬೇಕು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್ರಿಎಚ್ ಮಹದೇವಸ್ವಾಮಿ, ಮಹಾಸಭಾದ ತಾಲೂಕು ಅಧ್ಯಕ್ಷರಾದ ಚಾ.ನಗರ ನಟೇಶ್, ಗುಂಡ್ಲುಪೇಟೆಯ ಹಂಗಳ ನಂಜಪ್ಪ, ಕೊಳ್ಳೇಗಾಲದ ಮಹದೇವಪ್ರಸಾದ್, ಬಿ.ಕೆ. ರವಿಕುಮಾರ್, ಮೂಡ್ಲುಪುರ ಮಂಜೇಶ್, ಆರ್.ಎಸ್. ಲಿಂಗರಾಜು, ಮಹದೇವಸ್ವಾಮಿ, ನೌಕರರ ಸಂಘದ ಮಾಜಿ ಅಧ್ಯಕ್ಷ ಡಾ. ಪರಮೇಶ್ವರಪ್ಪ, ವಸಂತಮ್ಮ, ರತ್ನಮ್ಮ ಬಸವರಾಜು, ನಟರಾಜು, ಮನೋಜ್ ಪಟೇಲ್, ಗುರುಸ್ವಾಮಿ, ಮಹೇಶ್ ಪಟೇಲ್, ಮೊದಲಾದವರು ಇದ್ದರು.