ಗೌರವಾಧ್ಯಕ್ಷೆ ನರ್ಗೀಸ್ಬಾನು ಅವರಿಂದ ಅಭಿನಂದನೆ
ಚಾಮರಾಜನಗರ,ಸೆ.೨೩: ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನರಸೀಪುರ ತಾಲೂಕಿನ ಮೇಧಿನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಹಾಗೂ ನೆಟ್ಬಾಲ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿಯೂ ಆದ ಬಿ.ಮಹದೇವಪ್ರಸಾದ್ ಅವರನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ನೆಟ್ಬಾಲ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
ನಂತರ ಅಸೋಸಿಯೇಷನ್ನ ಗೌರವಾಧ್ಯಕ್ಷೆ ನರ್ಗೀಸ್ಬಾನು ಅವರು ಮಾತನಾಡಿ, ಮಹದೇವಪ್ರಸಾದ್ ಅವರಿಗೆ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಬಹಳ ಹೆಮ್ಮೆಯ ವಿಷಯ. ಜೊತೆಗೆ ನಮ್ಮ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿಯಾಗಿಯೂ ಕೂಡಾ ತಮ್ಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಬಿ.ಮಹದೇವ ಪ್ರಸಾದ್ ಅವರ ಪ್ರಾಮಾಣಿಕ ಪ್ರಯತ್ನ, ಶಿಸ್ತು, ಸಂಯಮ, ಬದ್ಧತೆ, ಹಾಗೂ ಮಕ್ಕಳ ವಿಚಾರದಲ್ಲಿ ಪೋಷಕರಿಗಿಂತಲೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವ ಅವರ ನಿಷ್ಠೆಗೆ ಸಂದ ಗೌರವ ಎಂದರು.
ಇದೇ ಸಂದರ್ಭದಲ್ಲಿ ಮುಂದೂಡಲಾಗಿದ್ದ ನೆಟ್ಬಾಲ್ ಪಂದ್ಯಾವಳಿಯ ಬಗ್ಗೆ ಚರ್ಚಿಸಿ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಮಹದೇವಪ್ರಸಾದ್ ಅವರು, ಎಲೆಮರೆ ಕಾಯಿಯಂತಿದ್ದ ನನ್ನನ್ನು ಹಾಗೂ ನನ್ನ ಸಾಧನೆಯನ್ನು ಗುರುತಿಸಿ, ಸರ್ಕಾರ ನನಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಇದಕ್ಕೆ ಮೇಧಿನ ಶಾಲೆಯ ಎಲ್ಲಾ ಶಿಕ್ಷಕರು, ಗ್ರಾಮಸ್ಥರು, ನನ್ನ ನೆಚ್ಚಿನ ಗುರುಗಳು ಹಾಗೂ ನಮ್ಮ ಅಸೋಸಿಯೇಷನ್ನ ಎಲ್ಲಾ ಪದಾಧಿಕಾರಿಗಳಿಗೂ ನಾನು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ನ ಅಧ್ಯಕ್ಷರಾದ ವಿ.ಶ್ರೀನಿವಾಸ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಮಧುಕುಮಾರ್ ಸಿ.ಎಂ., ಸಹ ಕಾರ್ಯದರ್ಶಿ ಸುರೇಶ್ ಕುಮಾರ್, ಸದಸ್ಯರಾದ ಶ್ರೀಧರ್, ಗಂಗಪ್ಪ, ಆಶಾ ಶ್ರೀನಿವಾಸ ಪ್ರಸಾದ್, ಕಲಾ ಶ್ರೀಕಂಠಸ್ವಾಮಿ, ಕಾಶಿ ನಾಗೇಂದ್ರ ಇತರರಿದ್ದರು.