ರಾಜ್ಯ ರೈಲ್ವೆ ಸಚಿವರು, ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಕೆ. ಸದ್ಯದಲ್ಲೇ ಸಿಎಂಗೆ ಮನವಿ ಸಲ್ಲಿಸಲಾಗುವುದು. ಚಾಮರಾಜನಗರ: ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಸಮಗ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು, ಹೆಚ್ಚಿನ ರೈಲು ಸಂಚಾರ ಆರಂಭಿಸಬೇಕು ಎಂದು ಚಾಮರಾಜನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು, ಡಿ.ಆರ್.ಯು.ಸಿ.ಸಿ ಸದಸ್ಯರಾದ ವಿ.ಪ್ರಭಾಕರ್ ಒತ್ತಾಯಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ರೈಲ್ವೆನಿಲ್ದಾಣದಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಏರ್ಪಡಿಸುವುದು, ಮುಂಜಾನೆ 6.00 ಗಂಟೆಗೆ ಪ್ರತಿ ಭಾನುವಾರ ಮೈಸೂರಿನಿಂದ ದಾದರ್ ಗೆ ಹೊರಡುವ ಶರಾವತಿ ಎಕ್ಸ್ಪ್ರೆಸ್ 11036 ರೈಲನ್ನು ಚಾಮರಾಜನಗರದಿಂದ ಹೊರಡುವ ಮತ್ತು ಆಗಮಿಸುವ ವ್ಯವಸ್ಥೆಯನ್ನು ಮಾಡುವುದು, ಚಾಮರಾಜನಗರದಿಂದ ಮೈಸೂರಿಗೆ ರಾತ್ರಿ 8.50 ಬಿಡುವ 56209 ರೈಲನ್ನು ಸಂಜೆ 6.45 ಕ್ಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಬೆಂಗಳೂರು ಹಾಗೂ ಚಾಮರಾಜನಗರದ ಜನತೆಯ ಬಹು ದಿನದ ಬೇಡಿಕೆಯಾದ ಚಾಮರಾಜನಗರ ಹೆಚ್ಚಾಲ ರೈಲ್ವೆ ಯೋಜನೆಯನ್ನು ಅತೀ ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕು. ಬೆಂಗಳೂರಿನ-ಹೆಜ್ಜಾಲದಿಂದ-ಕೊಳ್ಳೇಗಾಲ-ಚಾಮರಾಜನಗರ – ತಾಳವಾಡಿ, (ತಾಳವಾಡಿಯಿಂದ ಬಣ್ಣಾರಿಗೆ ಸುಮಾರು 15 ಕೀ.ಮೀ ಸುರಂಗ ಮಾರ್ಗ ನಿರ್ಮಿಸಿದಲ್ಲಿ ಯಾವುದೇ ಹುಲಿ ಯೋಜನೆ, ಆನೆ ಕಾರಿಡಾರ್) ಯೋಜನೆಗಳಿಗೂ ತೊಂದರೆಯಾಗದಂತೆ ಮೇಟುಪಾಳ್ಯಂ-ಕೊಯಮತ್ತೂರು ಸೇರಬಹುದಾಗಿದೆ ಈ ಯೋಜನೆಯನ್ನು ಸ್ಥಾಪಿಸಿದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಭಾರತಕ್ಕೆ ಉತ್ತಮ ಸಂಪರ್ಕವಾಗಲಿದೆ, ಸಂಜೆ 4 ಗಂಟೆಗೆ ಮೈಸೂರಿನಿಂದ-ತಂಜಾವೂರಿಗೆ ಬಿಡುವ 16232 ರೈಲನ್ನು ಚಾಮರಾಜನಗರದಿಂದ ಹೊರಡಿಸುವುದು. ಚಾಮರಾಜನಗರದಿಂದ ಮೈಸೂರಿಗೆ 20:45 ಕ್ಕೆ ರೈಲನ್ನು ವ್ಯವಸ್ಥೆ ಮಾಡುವುದು, ಒಂದು ಬಾರಿ ಮೈಸೂರಿಗೆ ಹೋಗಿ ಬಂದಲ್ಲಿ ಅನುಕೂಲವಾಗಲಿದೆ. ಎಂದರು. ಚಾಮರಾಜನಗರದಿಂದ – ಮೈಸೂರಿನ ಮಧ್ಯ ಇರುವ ಎಲ್ಲಾ ಲೆವೆಲ್ ಕ್ರಾಸಿಂಗ್ ಗಳನ್ನು ಸಿಂಗಲ್ ಅಥವಾ ಇಂಟರ್ ಲಾಕ್ ಗೇಟ್ಗಳಾಗಿ ಎಲ್ ಸಿ 35 40 43 ಗಳಲ್ಲಿ ಮಾರ್ಪಡಿಸುವುದು. ಕೌವಲಂದೆಯಲ್ಲಿ ಕ್ರಾಸಿಂಗ್ ಬ್ಲಾಂಕ್ ಸ್ಟೇಷನ್ ನಿರ್ಮಿಸುವುದು.ಚಾಮರಾಜನಗರದಿಂದ ಬೆಳಿಗ್ಗೆ ಸುಮಾರು 10.40 ರಿಂದ ಮದ್ಯಾಹ್ನ 3.30 ಹಾಗೂ ಮದ್ಯಾಹ್ನ 4.00 ರಿಂದ 5.30 ರವರೆಗೆ ರೈಲು ಸಂಚಾರ ಇಲ್ಲದಿದ್ದು ಈ ಸಮಯಗಳಲ್ಲಿ 2-3 ರೈಲುಗಳ ಸಂಚಾರ ಆರಂಭಿಸಬೇಕು. ಚಾಮರಾಜನಗರದಿಂದ ಬೆಂಗಳೂರಿಗೆ ಎಂಇಎಂಯು ರೈಲು ಬಿಡಬೇಕು.ಚಾಮರಾಜನಗರದಿಂದ ಮೈಸೂರಿಗೆ ದ್ವಿಪಥ ಮಾರ್ಗ ನಿರ್ಮಾಣ ಮಾಡಬೇಕು ಎಂದರು. ಚಾಮರಾಜನಗರದ ರೈಲ್ವೆ ನಿಲ್ದಾಣದಲ್ಲಿ ಪಿಟ್ ಲೈನ್, ಸಿಕ್ ಲೈನ್, ವಾಟರಿಂಗ್ ಪಾಯಿಂಟ್ ಸ್ಥಾಪಿಸುವುದು. ಚಾಮರಾಜನಗರಕ್ಕೆ ಬಂದು ಹೋಗುವ ಎಲ್ಲಾ ರೈಲುಗಳನ್ನು ವಿದ್ಯುತ್ ರೈಲುಗಳಾಗಿ ಮಾರ್ಪಡಿಸುವುದು.ಚಾಮರಾಜನಗರದಲ್ಲಿ ರೈಲ್ವೇ ನಿಲ್ದಾಣಕ್ಕೆ ಮಾಂಗಲ್ಯ ಕಲ್ಯಾಣ ಮಂದಿರದ ಮುಂದಿರುವ 80 ಅಡಿ ರೈಲ್ವೆ ಆಸ್ತಿಯಲ್ಲಿ ರಸ್ತೆ ಹಾಗೂ ಬೀದಿ ದೀಪದ ವ್ಯವಸ್ಥೆ ಬೇಕು. ಮರಿಯಾಲ ರೈಲ್ವೆ ಸೇತುವೆಯನ್ನು ವಾಹನ ಸಂಚಾರ ದಟ್ಟಣೆ ಇರುವುದರಿಂದ ಅಗಲೀಕರಿಸುವುದು. ಲೆವೆಲ್ ಕ್ರಾಸಿಂಗ್ ಗಳಲ್ಲಿ ರಸ್ತೆ ವಿಭಜಕಗಳನ್ನು ನಿರ್ಮಾಣ ಮಾಡುವುದು. ಗೂಡ್ಸ್ ಶೆಡ್ ಗೆ ರಸ್ತೆಯನ್ನು ನವೀಕರಿಸಿ ಶೆಲ್ಟರ್ ಅನ್ನು ನಿರ್ಮಿಸಬೇಕು, ರೈಲ್ವೆ ನಿಲ್ದಾಣದ ಸುತ್ತ ಇರುವ ರೈಲ್ವೇ ಆಸ್ತಿಯಲ್ಲಿ ಅನೈತಿಕ ಚಟುವಟಿಕೆ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದು ಸುತ್ತ ತಡೆಗೋಡೆ ನಿರ್ಮಿಸಿ ರೈಲ್ವೆ ಆಸ್ತಿಯನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು. ಈ ಸಂಬಂಧವಾಗಿ ರಾಜ್ಯ ರೈಲ್ವೆ ಸಚಿವರಾದ ವಿ.ಸೋಮಣ್ಣ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣನ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಾಮರಾಜನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಖಜಾಂಚಿ ಸಿ.ಎ.ನಾರಾಯಣ, ಗೌರವ ಕಾರ್ಯದರ್ಶಿ ಎನ್.ಪ್ರಸಾದ್, ಉಪಾಧ್ಯಕ್ಷ ಬಿ.ಕೆ.ಪ್ರಕಾಶ್, ಸದಸ್ಯ ಎಸ್.ಬಸವರಾಜು ಹಾಜರಿದ್ದರು.