ಕನ್ನಡಕ್ಕಾಗಿ ವಾಟಾಳ್ ನಾಗರಾಜ್ ಅವರು ಮಾಡಿದ ಚಳುವಳಿ ವಿಶ್ವ ದಾಖಲೆ

ಚಾಮರಾಜನಗರ : ಕನ್ನಡ ಚಳವಳಿಯ ಧೀಮಂತ ನಾಯಕ ವಾಟಾಳ್ ನಾಗರಾಜ್ ರವರ ಕನ್ನಡ ಸೇವೆ ಮತ್ತು ಕನ್ನಡಕ್ಕಾಗಿ ಮಾಡಿದ ಚಳುವಳಿ ಪ್ರಾದೇಶಿಕ ಭಾಷೆಗಳ ಉಳಿವಿನ ವಿಶ್ವ ದಾಖಲೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಅಖಿಲ ಕರ್ನಾಟಕ ಕನ್ನಡ ಮಹಾಸಭಾ , ತಾ.ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಗಂಧ ಕನ್ನಡ ಯುವಕರ ಸಂಘ ಸಂಯುಕ್ತವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಟಾಳ್ ಕನ್ನಡ ಚಳುವಳಿ ಮತ್ತು ವಿಚಾರಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡಿಗರಲ್ಲಿ ಹಲವಾರು ದಶಕಗಳಿಂದ ನಿರಂತರವಾಗಿ ಕನ್ನಡದ ಪ್ರಜ್ಞೆ ಕನ್ನಡದ ಜಾಗೃತಿ ಕನ್ನಡಕ್ಕಾಗಿ ಹೋರಾಟ ನಿರಂತರವಾಗಿ ನೆರವೇರಿಸಿ ಕೊಂಡು ಬರುತ್ತಿರುವ ವಾಟಾಳ್ ನಾಗರಾಜ್ ರವರ ಕನ್ನಡ ಚಳುವಳಿಯ ಆಲೋಚನೆಗಳು ದಾಖಲೆಯಾಗಿದೆ.

ಕನ್ನಡ ಸಂಸ್ಕೃತಿ ,ಪರಂಪರೆ ,ನೆಲ, ಜಲ, ಭಾಷೆಯ ಬಗ್ಗೆ ಕೋಟ್ಯಾಂತರ ಜನರಲ್ಲಿ ವಿಶೇಷವಾಗಿ ಗಡಿ ಭಾಗವಾದ ಚಾಮರಾಜನಗರದಲ್ಲಿ ಕನ್ನಡದ ಕಂಪನ್ನು ಶಾಶ್ವತವಾಗಿ ಮನೆಗಳಲ್ಲಿ ಬೆಳಗಿಸಿದ ಮಹಾನ್ ನಾಯಕರು. ಕನ್ನಡದ ನಾಯಕರು ಎಂದರೆ ವಾಟಾಳರು ಎಂದು ತಿಳಿಸಿ, ಶ್ರೇಷ್ಠ ಸಂಸದೀಯ ಪಟುವಾಗಿ ಶಾಸನ ಸಭೆಯ ಸದಸ್ಯರಾಗಿ ಸುಧೀರ್ಘವಾಗಿ ಚರ್ಚೆಗಳಲ್ಲಿ ಭಾಗವಹಿಸಿರುವ , ಸದನಕ್ಕೆ ಗೈರು ಹಾಜರಾಗದ ವಾಟಾಳ್ ನಾಗರಾಜ್ ರವರ ಭಾಷಣದ ಶೈಲಿ ಅಮೋಘವಾದದ್ದು. ವಾಟಾಳರ ಚಿಂತನೆ ಕನ್ನಡವನ್ನು ಜನಸಾಮಾನ್ಯರಲ್ಲೂ ಹತ್ತಿರಕ್ಕೆ ತಂದ ಅವರ ಚಳುವಳಿ ಮರೆಯಲಾಗದು ಎಂದರು.

ಕನ್ನಡ ಚಳುವಳಿಯ ನಾಯಕರಾದ ಪುರುಷೋತ್ತಮ್ ರವರ ಮಾತನಾಡಿ ಚಾಮರಾಜನಗರದ ಶಾಸಕರಾಗಿದ್ದ ವಾಟಾಳರು ಇಡೀ ಕರ್ನಾಟಕವನ್ನೇ ಪ್ರತಿನಿಧಿಸಿ ಕನ್ನಡಕ್ಕೆ ಕುತ್ತು ಬಂದಾಗ ಅದನ್ನು ಎದುರಿಸಿ ಶಾಶ್ವತ ಪರಿಹಾರಗಳನ್ನು ಕಂಡುಹಿಡಿದ ಸೇವೆ ಅನನ್ಯವೆಂದರು.

ಕನ್ನಡ ಚಳುವಳಿಯ ನಾಯಕರಾದ ನಿಜಧ್ವನಿಗೋವಿಂದರಾಜು ವಾಟಾಳರ ಕೊಡುಗೆ ಅಪಾರವಾದದ್ದು. ಕರ್ನಾಟಕವಲ್ಲದೆ ದಕ್ಷಿಣಭಾರತ ಮತ್ತು ಉತ್ತರ ಭಾರತದಲ್ಲಿ ಅಭಿಮಾನಿಗಳು ಇದ್ದು ಪ್ರಾದೇಶಿಕ ಭಾಷೆಗಳ ಹೋರಾಟದ ನಾಯಕ ರೆಂದರು.

ಕನ್ನಡ ಚಳುವಳಿಯ ನಾಯಕ ಜನಪದ ಜ.ಸುರೇಶ್ ನಾಗ್ ಮಾತನಾಡಿ ಚಾಮರಾಜನಗರ ಹಳ್ಳಿ ಹಳ್ಳಿಗೆ ರಸ್ತೆ ಹಾಗೂ ನೀರು ಕಲ್ಪಿಸಿದ ವ್ಯಕ್ತಿ . ಚಾಮರಾಜನಗರ ಅವರಿಗೆ ಪುಣ್ಯಭೂಮಿ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಗೌಡ ಮಾತನಾಡಿ 5 ಬಾರಿ ಶಾಸಕರಾಗಿ ಶಾಶ್ವತ ಕಾರ್ಯ ಮಾಡಿದವರು. ಜಿಲ್ಲಾ ಕೇಂದ್ರವಾಗಿ ಚಾಮರಾಜನಗರ ಆಗಲು ವಾಟಾಳ್ ರವರೆ ಕಾರಣ. ಚಾಮರಾಜನಗರಕ್ಕೆ ಕುಡಿಯುವ ನೀರು ತಂದದ್ದು ವಾಟಾಳ್ ನಾಗರಾಜ್ ರವರು. ನಾಡಿನ ಎಲ್ಲೆಡೆ ಕನ್ನಡದ ಹೋರಾಟ , ಚಳುವಳಿಯ ನಾಯಕರನ್ನು ಬೆಳೆಸಿದ ವಾಟಾಳ್ ನಾಗರಾಜ್ ಕನ್ನಡದ ಕೂಗನ್ನು ಉಸಿರಾಗಿಸಿಕೊಂಡಿದ್ದಾರೆ . ವಾಟಾಳ್ ನಾಗರಾಜ್ ಅವರ ಸುಧೀರ್ಘ ಕನ್ನಡದ ಹೋರಾಟದ ಹಿನ್ನಲೆಯಲ್ಲಿ ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕರ್ನಾಟಕ ರತ್ನ ನೀಡಲೇಬೇಕೆಂದು ಒತ್ತಾಯಿಸಿದರು.

ಶ್ರೀಗಂಧ ಕನ್ನಡ ಸಂಘದ ಅಧ್ಯಕ್ಷರಾದ ರವಿಚಂದ್ರ ಪ್ರಸಾದ್, ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಪ್ರಜ್ಞೆಯನ್ನು ಕೋಟಿ ಕೋಟಿ ಕನ್ನಡಿಗರಲ್ಲಿ ಬೆಳೆಸಿರುವ ವಾಟಾಳ್ ನಾಗರಾಜ್ ರವರ ಹೋರಾಟದ ಜೀವನದ ಘಟನೆಗಳು ಅವರ ಹೋರಾಟದ ಚಿಂತನೆ ಪರಿಕಲ್ಪನೆ ನಿತ್ಯ ವಿನೂತನವೆಂದು ,ಸೆಪ್ಟೆಂಬರ್ 7 ಕನ್ನಡಕ್ಕಾಗಿ ಬೂಟು ಏಟು ತಿಂದ ವಾಟಾಳ್ ರವರು ಅಂದೆ ಜನ್ಮದಿನ ಎಂದು ತಿಳಿಸಿದರು.
ಕನ್ನಡ ಹೋರಾಟಗಾರ ಪಣ್ಯದ ಹುಂಡಿ ಪುಟ್ಟ ಸ್ವಾಮಿ, ಕುಮಾರ್, ದೊಡ್ಡ ರಾಯಪೇಟೆ ನಾಗಣ್ಣ, ಮಹದೇವ,
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಶ್ರೀಮತಿ ಸರಸ್ವತಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *