ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಮೇಳದಲ್ಲಿ ಶೇ.೨೦ ರಷ್ಟು ರಿಯಾಯಿತಿ: ವೈ.ಸಿ. ನಾಗೇಂದ್ರ
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಿಂದ ಜಿಲ್ಲೆಯಲ್ಲಿ ೪೬ನೇ ನಂದಿನಿ ಮಾರಾಟ ಮಳಿಗೆಯನ್ನು ೭೭ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ನಗರದ ಗುಂಡ್ಲುಪೇಟೆ ಸರ್ಕಲ್ನಲ್ಲಿ ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ಉದ್ಘಾಟನೆ ಮಾಡಿದರು.
ನಗರದ ಗುಂಡ್ಲುಪೇಟೆ ಸರ್ಕಲ್ನ ಅರಳಿಮರ ಪಕ್ಕದಲ್ಲಿ ನೂತನ ನಂದಿನಿ ಮಾರಾಟ ಮಳಿಗೆ ಉದ್ಘಾಟನೆ ಹಾಗೂ ೩೫ ದಿನಗಳ ಕಾಲ ನಡೆಯುವ ನಂದಿನಿ ಸಿಹಿ ಉತ್ಸವ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕುದೇರಿನಲ್ಲಿ ಹಾಲು ಒಕ್ಕೂಟವು ಬಹಳ ಸುಸಜ್ಜಿತವಾಗಿ ಜಿಲ್ಲೆಯ ಗ್ರಾಹಕರಿಗೆ ಶುದ್ದ, ಉತ್ಕೃಷ್ಟವಾದ ನಂದಿನಿ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಹಾಗೂ ನಂದಿನಿ ಸಿಹಿ ಉತ್ಪನ್ನಗಳನ್ನು ತಯಾರು ಮಾಡಿ, ಕೆಎಂಎಫ್ ಸಹಯೋಗದಲ್ಲಿ ಮಾರಾಟ ಮಾಡುತ್ತಿದೆ. ಜಿಲ್ಲಾದ್ಯಂತ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ೪೬ನೇ ನಂದಿನಿ ಮಾರಾಟ ಮಳಿಗೆಯನ್ನು ಉದ್ಘಾಟಿಸಲಾಗಿದೆ ಎಂದರು.
ಜಿಲ್ಲೆಯ ಜನರಿಗೆ ನಂದಿನಿ ಸಿಹಿ ಉತ್ಪನ್ನಗಳನ್ನು ಪರಿಚಯಿಸುವ ಸಲುವಾಗಿ ಒಕ್ಕೂಟ ಮತ್ತು ಕೆಎಂಎಫ್ ಸಹಯೋಗದಲ್ಲಿ ೩೫ ದಿನಗಳ ಕಾಲ ನಂದಿನಿ ಸಹಿ ಉತ್ಪನ್ನಗಳ ರಿಯಾಯಿತಿ ಮಾರಾಟ ಮೇಳವನ್ನು ಇಂದಿನಿಂದ ಆರಂಭಿಸಲಾಗಿದೆ. ಶೇ. ೨೦ ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಎಲ್ಲಾ ನಂದಿನಿ ಮಾರಾಟ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನಮ್ಮ ಒಕ್ಕೂಟದಲ್ಲಿಯೇ ತಯಾರಾಗುವ ಉಲ್ಲಾಸ್ ಗುಲ್ಲ್ಲಾಗೆ ಭಾರಿ ಬೇಡಿಕೆಯಿಂದ ಇದೆ. ಮುಂದಿನ ದಿನಗಳಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯು ನಂದಿನಿ ಹಾಲಿನ ಕ್ಷೀರ ಕೇಂದ್ರಗಳನ್ನು ತೆರೆಯುವ ಚಿಂತನೆ ಮಾಡಲಾಗಿದೆ ಎಂದು ನಾಗೇಂದ್ರ ತಿಳಿಸಿದರು.
ಒಕ್ಕೂಟವು ಪ್ರತಿ ದಿನ ೨.೬೦ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ೫೫ ಸಾವಿರ ಲೀಟರ್ ನಂದಿನಿ ಹಾಲು, ೧೦ ಸಾವಿರ ಲೀಟರ್ ಮೊಸರು, ೮೦ ಸಾವಿರ ಲೀಟರ್ ಗುಡ್ಲೈಪ್ ಹಾಲು ತಯಾರಿಕೆಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ತಮಿಳುನಾಡು ಮತ್ತು ಕೇರಳದಲ್ಲಿಯೂ ಸಹ ನಂದಿನಿ ಮಾರಾಟ ಕೇಂದ್ರಗಳನ್ನು ತೆರದು ಎಲ್ಲಾ ರೀತಿಯ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.
ಚಾಮುಲ್ ನಿರ್ದೇಶಕರಾದ ಎಚ್.ಎಸ್.ಬಸವರಾಜು, ಸದಾಶಿವಮೂರ್ತಿ, ಶೀಲಾ ಪುಟ್ಟರಂಗಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ. ರಾಜಕುಮಾರ್, ಮಾರುಕಟ್ಟೆ ವ್ಯವಸ್ಥಾಪಕ ಎಂ. ಪ್ರಸಾದ್, ಉಪ ವ್ಯವಸ್ಥಾಪಕರಾದ ಶಿವಕುಮಾರ್, ರವೀಂದ್ರಪ್ರಸಾದ್, ಮಾರುಕಟ್ಟೆ ಅಧಿಕಾರಿ ರಾಘವೇಂದ್ರ ರಾವ್, ತಾಂತ್ರಿಕ ಅಧಿಕಾರಿ ಎನ್.ಎಸ್. ರಾಜೇಂದ್ರ, ಮಾರುಕಟ್ಟೆ ಸಹಾಯಕರಾದ ನೂತನ, ಆನಂದ್, ಮಹದೇವಸ್ವಾಮಿ, ನಂದಿನಿ ಪಾರ್ಲರ್ನ ಮಾಲೀಕರಾದ ನಗರಸಭಾ ಮಾಜಿ ಉಪಾಧ್ಯಕ್ಷೆ ವಾಹಿದ್ ಖಾನಂ, ನಜೀಮ್ ಪಾಷಾ ಇತರರು ಇದ್ದರು.