ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಎಲ್ಲಾ ತಾಲೂಕುಗಳ ಅರಣ್ಯದಂಚಿನ ಪ್ರದೇಶಗಳಲ್ಲಿ ಬರುವ 98 ಫೀಢರ್ಗಳಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಲು ಅಗತ್ಯ ಕ್ರಮ ವಹಿಸಬೇಕು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸಂಬಂಧ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಸೆಸ್ಕಾಂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ಒಟ್ಟು 179 ವಿದ್ಯುತ್ ಫೀಡರ್ಗಳಿದ್ದು, ಈ ಪೈಕಿ ಹಗಲಿನ ವೇಳೆಯಲ್ಲಿಯೇ ವಿದ್ಯುತ್ ಸರಬರಾಜು ಮಾಡಬೇಕು. ಜಿಲ್ಲೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ವಿಭಾಗ ವ್ಯಾಪ್ತಿಯಲ್ಲಿ ಬರುವ 98 ಕಾಡಂಚಿನ ಪ್ರದೇಶಗಳಲ್ಲಿ ಬೆಳಿಗ್ಗೆ 7.30ರಿಂದ ಸಂಜೆ 5.30ರವರೆಗೆ 3 ಬ್ಯಾಚ್ಗಳಲ್ಲಿ ವಿದ್ಯುತ್ ಸರಬರಾಜು ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಉಳಿದ 81 ಕೃಷಿ ಸಂಬಂಧಿತ ಫೀಡರ್ಗಳಿಗೆ 3 ಬ್ಯಾಚ್ಗಳಲ್ಲಿ ಹಗಲಿನಲ್ಲಿ 2 ಬ್ಯಾಚ್ ಹಾಗೂ ರಾತ್ರಿ ವೇಳೆಯಲ್ಲಿ 1 ಬ್ಯಾಚ್ನಲ್ಲಿ 2 ವಿಭಾಗಗಳಾಗಿ ವಿಂಗಡಿಸಿ ವಿದ್ಯುತ್ ಸರಬರಾಜು ಮಾಡಬೇಕು. ಇದರ ಅನುಸಾರ ಹಗಲು, ರಾತ್ರಿವೇಳೆ ಬ್ಯಾಚ್ಗಳಲ್ಲಿ ವಾರಕ್ಕೆ ಒಂದು ಬಾರಿ ಬದಲಾವಣೆ ಮಾಡಿ ವಿದ್ಯುತ್ ಸರಬರಾಜು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾಡಂಚಿನ ನೀರಾವರಿ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ಬ್ಯಾಚ್-1ರಲ್ಲಿ 50 ಪೀಡರ್ಗಳಿಗೆ 7.30ರಿಂದ 12.30ರವರೆಗೆ, ಬ್ಯಾಚ್-2ರಲ್ಲಿ 19 ಫೀಡರ್ಗಳಿಗೆ 10ರಿಂದ 1ಗಂಟೆಯವರೆಗೆ, ಬ್ಯಾಚ್-3ರಲ್ಲಿ 29 ಫೀಡರ್ಗಳಿಗೆ 12.30ರಿಂದ 5.30ರವರೆಗೆ ವಿದ್ಯುತ್ ಪೂರೈಸಲಾಗುತ್ತದೆ. ಕೃಷಿ ಫೀಡರ್ಗಳಿಗೆ ದಿನದಲ್ಲಿ 5 ಗಂಟೆಗಳ ವಿಶ್ವಾಸಾರ್ಹ ನಿರಂತರ ವಿದ್ಯುತ್ ಪೂರೈಸಬೇಕು. ಮತ್ತು ವಿದ್ಯುತ್ ಹೊರೆಗೆ ಅನುಗುಣವಾಗಿ ಹಗಲು ಮತ್ತು ರಾತ್ರಿಯ ಬ್ಯಾಚ್ನಲ್ಲಿ ನೀಡುವ ಸಂಬಂಧ ಸಬೆಯಲ್ಲಿ ಚರ್ಚಿಸಲಾಯಿತು.
81 ಕೃಷಿ ಫೀಡರ್ಗಳನ್ನು 3 ಬ್ಯಾಚ್ಗಳಾಗಿ ಹಗಲಿನ ವೇಳೆಯಲ್ಲಿ 2 ಬ್ಯಾಚ್, ರಾತ್ರಿ ವೇಳೆಯಲ್ಲಿ 1 ಬ್ಯಾಚ್ ಅನ್ನು 2 ವಿಭಾಗಳಾಗಿ ವಿಂಗಡಿಸಿ ನೀಡಲು ನಿರ್ಣಯಿಸಲಾಯಿತು. ಇದರ ಅನುಸಾರ ಹಗಲು ಮತ್ತು ರಾತ್ರಿ ವೇಳೆಯ ಬ್ಯಾಚ್ ಗಳನ್ನು ವಾರಕ್ಕೆ ಒಂದು ಬಾರಿ ಹಗಲು ಮತ್ತು ರಾತ್ರಿ ವೇಳೆ ಬದಲಾವಣೆ ಮಾಡಿ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಲಾಯಿತು.
ಬ್ಯಾಚ್-1ರಲ್ಲಿ ಹಗಲು ವೇಳೆ 34 ಫೀಡರ್ಗಳಿಗೆ 7.30ರಿಂದ 12.30ರವರೆಗೆ, ಬ್ಯಾಚ್-2ರಲ್ಲಿ 17 ಫೀಡರ್ಗಳಿಗೆ 12.30ರಿಂದ 5.30ರವರೆಗೆ, ಬ್ಯಾಚ್-3ರಲ್ಲಿ 1ನೇ ವಿಭಾಗದಲ್ಲಿ 9 ಫೀಡರ್ಗಳಿಗೆ ರಾತ್ರಿ ವೇಳೆ 9ರಿಂದ 2 ಗಂಟೆಯವರೆಗೆ, ಮತ್ತು ರಾತ್ರಿ ವೇಳೆ 21 ಫೀಡರ್ಗಳಿಗೆ 1ರಿಂದ ಬೆಳಗಿನ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಸಭೆಯಲ್ಲಿ ನಿರ್ಣಯಿಸಲಾಯಿತು.
ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಜಿಲ್ಲೆಯಲ್ಲಿ ಹೊಸದಾಗಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಪ್ರಸ್ತಾವನೆಯನ್ನು ಅದಷ್ಟು ಶೀಘ್ರ್ರವಾಗಿ ಸಲ್ಲಿಸಬೇಕು. ಚಾಮರಾಜನಗರ ತಾಲೂಕಿನಲ್ಲಿ ಸೋಮವಾರಪೇಟೆ, ವೀರನಪುರ, ಸಂತೆಮರಹಳ್ಳಿ, ಗುಂಡ್ಲುಪೇಟೆ ತಾಲೂಕಿನಲ್ಲಿ ವಡ್ಡಗೆರೆ, ಹೊರೆಯಾಲ, ಭೀಮನಬೀಡು, ಹಾಗೂ ಹನೂರು ತಾಲೂಕಿನಲ್ಲಿ ಹನೂರು ಹಾಗೂ ಮಹದೇಶ್ವರ ಬೆಟ್ಟ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಉಪಕೇಂದ್ರಗಳನ್ನು ತೆರದು ಗುಣಮಟ್ಟದ ವಿದ್ಯುತ್ ಅನ್ನು ಕ್ರಮಬದ್ಧವಾಗಿ ಒದಗಿಸಲು ಅನುಕೂಲವಾಗುವಂತೆ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಲು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ವಿಪಲಗೊಳ್ಳುವ ಪರಿವರ್ತಕಗಳಲನ್ನು 72 ಗಂಟೆಯೊಳಗೆ ಬದಲಾಯಿಸಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಾಮರಾಜನಗರ ತಾಲೂಕು ವ್ಯಾಪ್ತಿಯ ಬೇಡಗುಳಿ, ಮಾರಿಗುಡಿಪೋಡು, ಕಾಡಿಗೆರೆ, ಬಿಸಿಲಗೆರೆ, ಮಾಣಿಕ್ಯಪೋಡು,ಕೆ.ಗುಡಿ, ಕನ್ನೇರಿ ಕಾಲೋನಿ, ಭೂತಯ್ಯನ ಪೋಡು, ಯಳಂದೂರು ತಾಲೂಕಿನ ಪುರಾಣಿಪೋಡು, ಹನೂರು ತಾಲೂಕು ವ್ಯಾಪ್ತಿಯ ಕೆರೆದಿಬ್ಬ, ಮಂದಾರೆ, ಇಂಡಿಗನತ್ತ, ತುಳಸಿಕೆರೆ, ಪಡಸಲನತ್ತ, ಮೆದಗಾಣೆ, ಪಾಲಾರ್, ತೊಕ್ಕೆರೆ, ಕೊಕ್ಕೆಬೋರೆ, ದೊಡ್ಡಾಣೆ, ಅಪ್ಪಕೆಂಪಟ್ಟಿ, ಜಂಬುಕಟ್ಟೆ, ಹಾಡಿಗಳಿಗೆ ಈಗಾಗಲೇ ಸೋಲಾರ್ ಮುಖೇನ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಈ ಹಾಡಿಗಳಲ್ಲಿ ವಿದ್ಯುತ್ ಪೂರೈಸಲು ಶಾಶ್ವತ ಪರಿಹಾರವಾಗಿ ಚೆಸ್ಕಾಂ ನಿಂದ ಸಂಪ್ರಾದಾಯಿಕ ವಿದ್ಯುತ್ ಮೂಲ ಅಳವಡಿಸಲು 44 ಕೋಟಿ ರೂ. ಗಳ ಅಂದಾಜುಪಟ್ಟಿ ತಯಾರಿಸಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅನುಮತಿಯೊಂದಿಗೆ ಪ್ರಥಮಾಧ್ಯತೆ ಮೇರೆಗೆ ಕಾಮಗಾರಿ ನಿರ್ವಹಿಸುವಂತೆ ಸಚಿವರು ನಿರ್ದೇಶನ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಳೆಯ ಆನೆಮಡುವಿನ ಕೆರೆಗೆ ನೀರು ತುಂಬಿಸಲು ಅನಗತ್ಯ ವಿಳಂಬವಾಗುತ್ತಿದೆ. ಯಾವುದೇ ಅಡೆತಡೆಗಳಿದ್ದರೂ ಸೂಕ್ತ ಪರಿಹಾರ ಕಂಡುಕೊಂಡು ಕೆರೆಗೆ ತುಂಬಿಸಲು ಅಧಿಕಾರಿಗಳು ಮುಂದಾಗಬೇಕು. ಸಾರ್ವಜನಿಕರಿಗೆ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಅಲ್ಲದೆ ಮಳೆಯ ಅಭಾವದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರು ಮತ್ತು ರೈತ ಬಾಂಧವರು ಈ ಕಷ್ಟಕರ ಪರಿಸ್ಥಿತಿಯಲ್ಲಿ ಚರ್ಚಿಸಲಾಗಿರುವ ನಿರ್ಣಯಗಳಿಗೆ ಸಹಕಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಕೋರಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಚೆಸ್ಕಾಂ ಮುಖ್ಯ ಎಂಜಿನಿಯರ್ ಮಹದೇವಸ್ವಾಮಿ, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.