ಚಾಮರಾಜನಗರ: ಜನಸಾಮಾನ್ಯರ ಅನುಕೂಲಕ್ಕಾಗಿ ಶೀಘ್ರವಾಗಿ ಪ್ರಕರಣ ಇತ್ಯರ್ಥವಾಗಬೇಕು ಎಂಬ ಸದುದ್ದೇಶದಿಂದ ಕಳೆದ ಸೆಪ್ಟೆಂಬರ್ ೯ರಂದು ನಡೆದ ಮೆಗಾ ಲೋಕ್ ಅದಾಲತ್ ನಲ್ಲಿ ಜಿಲ್ಲೆಯಲ್ಲಿ ಒಟ್ಟು ೧೬,೩೦೫ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜಿಲ್ಲಾ ನ್ಯಾಯಾಧೀಶರು ಜಿಲ್ಲೆಯಲ್ಲಿ ನಡೆದ ಮೆಗಾ ಲೋಕ್ ಅದಾಲತ್ ನಲ್ಲಿ ೨,೪೩೧ ನ್ಯಾಯಾಲಯದ ಪ್ರಕರಣಗಳು ಹಾಗೂ ೧೩೬೦೪ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟಾರೆ ೧೬,೦೩೫ ಪ್ರಕರಣಗಳು ಬಗೆಹರಿದಿವೆ. ಒಟ್ಟು ೭,೭೨,೧೮,೯೯೨ ರೂ. ನಷ್ಟು ದಂಡ ವಸೂಲಿ, ಪರಿಹಾರ, ವಿಮೆ ಮೌಲ್ಯ ಒಳಗೊಂಡಿದೆ ಎಂದರು.
ಚಾಮರಾಜನಗರ ತಾಲೂಕಿನಲ್ಲಿ ೮೦೪ ನ್ಯಾಯಾಲಯದ ಪ್ರಕರಣಗಳು, ೭,೬೫೪ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು ೮,೪೫೮ ಪ್ರಕರಣಗಳು ಇತ್ಯರ್ಥಗೊಂಡಿವೆ. ಯಳಂದೂರು ತಾಲೂಕಿನಲ್ಲಿ ೨೩೬ ನ್ಯಾಯಾಲಯದ ಪ್ರಕರಣಗಳು, ೮೫೮ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು ೧,೦೯೪ ಪ್ರಕರಣಗಳು ಇತ್ಯರ್ಥಗೊಂಡಿವೆ. ಕೊಳ್ಳೇಗಾಲ ತಾಲೂಕಿನಲ್ಲಿ ೧,೧೪೮ ನ್ಯಾಯಾಲಯದ ಪ್ರಕರಣಗಳು, ೩,೭೩೨ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು ೪,೮೮೦ ಪ್ರಕರಣಗಳು ಇತ್ಯರ್ಥಗೊಂಡಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ ೨೪೩ ನ್ಯಾಯಾಲಯದ ಪ್ರಕರಣಗಳು, ೧,೩೬೦ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು ೧,೬೦೩ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ಲೋಕ್ ಅದಾಲತ್ ನಲ್ಲಿ ೨೦ ವರ್ಷಕ್ಕೂ ಹೆಚ್ಚಿನ ಲಿಟಿಗೇಶನ್ ಪ್ರಕರಣವೊಂದು ರಾಜಿಯಿಂದ ಬಗೆ ಹರಿದಿದೆ. ಅಲ್ಲದೇ ದಾಂಪತ್ಯ ಕಲಹದ ೩ ವ್ಯಾಜ್ಯ ಪೂರ್ವ ಪ್ರಕರಣಗಳು ಸಹ ಇತ್ಯರ್ಥವಾಗಿದೆ. ಇದರಲ್ಲಿ ಚಾಮರಾಜನಗರದಲ್ಲಿ ೨, ಕೊಳ್ಳೇಗಾಲದ ೧ ಪ್ರಕರಣ ಸೇರಿವೆ. ಈ ಎಲ್ಲಾ ಪ್ರಕರಣಗಳು ಒಮ್ಮತದಿಂದ ತೀರ್ಮಾನವಾಗಿರುವುದು ಲೋಕ್ ಅದಾಲತ್ ನ ವಿಶೇಷ ಎನಿಸಿದೆ ಎಂದರು.
ಕಳೆದ ಜುಲೈ ೮ರಂದು ನಡೆದ ಲೋಕ್ ಅದಾಲತ್ ನಲ್ಲಿ ಇತ್ಯರ್ಥವಾದ ಪ್ರಕರಣಗಳಿಗಿಂತ ಸೆಪ್ಟೆಂಬರ್ ೯ರಂದು ನಡೆದ ಅದಾಲತ್ನಲ್ಲಿ ಹೆಚ್ಚಿನ ಪ್ರಕರಣಗಳು ವಿಲೇವಾರಿಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ನ್ಯಾಯಾಲಂiiಗಳ ಮೇಲಿನ ಪ್ರಕರಣಗಳ ಹೊರೆ ತಗ್ಗಿದೆ. ಲೋಕ್ ಅದಾಲತ್ ಯಶಸ್ಸಿಗೆ ಶ್ರಮಿಸಿದ ಎಲ್ಲಾ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್, ಕಂದಾಯ, ಅಬಕಾರಿ, ಕಾರ್ಮಿಕ ಇಲಾಖೆ, ಆಹಾರ ಇಲಾಖೆ, ಇತರ ಇಲಾಖೆಗಳು ಮಾಧ್ಯಮ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿಯವರಾದ ಎನ್.ಕೆ. ವಿರೂಪಾಕ್ಷ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.