“ಖಾಸಗೀಕರಣದಿಂದ ಪಾರು ಮಾಡಿ ಮೈಶುಗರ್ ಗೆ ಮರುಜೀವ – 5 ಸಾವಿರ ರೈತರಿಂದ 5 ಲಕ್ಷ ಟನ್ ಅರೆಯುವ ಗುರಿ, 7 ರೈತರಿಗೆ ಸಚಿವರಿಂದ ಚೆಕ್ ವಿತರಣೆ”
“ಕಾಮಧೇನುವಾಗಿದ್ದ ಮೈಶುಗರ್ ಗೆ ಸಚಿವ ಚಲುವರಾಯಸ್ವಾಮಿ ಆಶಾಕಿರಣ – ಟನ್ ಗೆ ರೂ.3,383 ದರ, ಅನ್ನದಾತನ ಮೊಗದಲ್ಲಿ ಮಂದಹಾಸ”
ಬೆಂಗಳೂರು: ಮಂಡ್ಯ ಜಿಲ್ಲೆಯ ರೈತರ ಪಾಲಿನ ಜೀವನಾಡಿ, ಐತಿಹಾಸಿಕ ಮೈಶುಗರ್ ಕಾರ್ಖಾನೆಗೆ ಕಬ್ಬು ಪೂರೈಸಿದ್ದ ರೈತರಿಗೆ ಆರ್ಥಿಕ ನೆಮ್ಮದಿ ಕಲ್ಪಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ಕಬ್ಬು ಬೆಳೆಗಾರರಿಗೆ ಅಧಿಕೃತವಾಗಿ ಅಂತಿಮ ಬಟವಾಡೆಯ ಹಣದ ಚೆಕ್ ವಿತರಿಸುವ ಮೂಲಕ ಮಹತ್ವದ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಮಳೆ ಕೊರತೆಯಿಂದ ಕಂಗೆಟ್ಟಿದ್ದ ಅನ್ನದಾತರಿಗೆ ಸಚಿವರ ಈ ತ್ವರಿತ ಸ್ಪಂದನೆ ದೊಡ್ಡ ಮಟ್ಟದ ನೆಮ್ಮದಿ ನೀಡಿದೆ.
ಒಂದು ಕಾಲದಲ್ಲಿ ಮಂಡ್ಯದ ರೈತರ ಕಾಮಧೇನುವಾಗಿದ್ದ ಈ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಕಾರ್ಖಾನೆ, ಆಡಳಿತಾತ್ಮಕ ವೈಫಲ್ಯ ಹಾಗೂ ನಿರ್ವಹಣಾ ಲೋಪಗಳಿಂದಾಗಿ ಮುಚ್ಚುವ ಹಂತಕ್ಕೆ ತಲುಪಿತ್ತು. ಖಾಸಗೀಕರಣದ ತೂಗುಗತ್ತಿ ಕಾರ್ಖಾನೆಯ ಮೇಲಿದ್ದಾಗ, ಬೆಳೆದ ಕಬ್ಬನ್ನು ಎಲ್ಲಿಗೆ ಪೂರೈಸಬೇಕು, ಹಣ ಬರುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ರೈತರು ಹೋರಾಟ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು. ಆದರೆ, ರೈತರ ಪರವಾದ ಬದ್ಧತೆ ಹೊಂದಿರುವ ಸಚಿವ ಚಲುವರಾಯಸ್ವಾಮಿ ಅವರ ದಿಟ್ಟ ನಿಲುವು ಹಾಗೂ ಇಚ್ಛಾಶಕ್ತಿಯ ಫಲವಾಗಿ, ಕಾರ್ಖಾನೆಯನ್ನು ಖಾಸಗೀಕರಣ ಮಾಡದೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಲಾಯಿತು. ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿ ಅಗತ್ಯ ಅನುದಾನ ತಂದು, ಹಳೆಯ ಯಂತ್ರಗಳ ದುರಸ್ತಿ ಮಾಡಿಸಿ ಕಾರ್ಖಾನೆಗೆ ಮರುಜೀವ ನೀಡಿದ ಶ್ರೇಯಸ್ಸು ನೇರವಾಗಿ ಸಚಿವರಿಗೆ ಸಲ್ಲುತ್ತದೆ.
ಸಚಿವರ ಈ ದಕ್ಷ ಕಾರ್ಯವೈಖರಿಯಿಂದಾಗಿ ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಮೈಶುಗರ್ ವ್ಯಾಪ್ತಿಯ ಒಟ್ಟು 5 ಸಾವಿರ ಮಂದಿ ರೈತರು ಕಬ್ಬು ಪೂರೈಸಲು ಒಪ್ಪಿಗೆ ನೀಡಿದ್ದರು. ರೈತರ ಹಿತದೃಷ್ಟಿಯಿಂದ ಪ್ರತಿ ಟನ್ ಕಬ್ಬಿಗೆ 3,383 ರೂ.ಗಳ ದರವನ್ನು ನಿಗದಿಪಡಿಸಲಾಗಿದ್ದು, ಈ ವರ್ಷ ಒಟ್ಟು 5 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಇದರಲ್ಲಿ ಈಗಾಗಲೇ 2 ಲಕ್ಷ ಟನ್ ಕಬ್ಬು ಯಶಸ್ವಿಯಾಗಿ ಪೂರೈಕೆಯಾಗಿದ್ದು, ಕಬ್ಬು ಪೂರೈಕೆಯ ನಂತರದ ಹಣ ಪಾವತಿಯ ಬಗ್ಗೆ ರೈತರಲ್ಲಿದ್ದ ಆತಂಕವನ್ನು ಸಚಿವರು ಸಂಪೂರ್ಣವಾಗಿ ದೂರ ಮಾಡಿದ್ದಾರೆ.
ಪಾರದರ್ಶಕತೆಗೆ ಒತ್ತು ನೀಡಿರುವ ಸಚಿವ ಚಲುವರಾಯಸ್ವಾಮಿ ಅವರು, ಇಂದು ಸಾಂಕೇತಿಕವಾಗಿ 7 ಮಂದಿ ರೈತರಿಗೆ ಅಂತಿಮ ಬಟವಾಡೆ ಚೆಕ್ ಅನ್ನು ತಮ್ಮ ಅತಿಥಿ ಗೃಹದಲ್ಲಿ ವಿತರಿಸಿದರು. ಉಳಿದ ಯಾವುದೇ ರೈತರು ತಮ್ಮ ಹಣಕ್ಕಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ನಾಳೆಯಿಂದಲೇ ಹಂತ ಹಂತವಾಗಿ ಪೂರೈಕೆದಾರ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮೆ ಮಾಡಲು ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿದ್ದಾರೆ.
ಸಚಿವರ ಈ ಜನಪರವಾದ ನಡೆ ಕೃಷಿ ವಲಯದಲ್ಲಿ ಹೊಸ ಹುರುಪು ಮೂಡಿಸಿದ್ದು, ಸಂಕಷ್ಟದ ಕಾಲದಲ್ಲಿ ರೈತರ ಕೈಸೇರುತ್ತಿರುವ ಈ ಹಣ ಮಳೆಯಿಲ್ಲದೆ ಕಂಗೆಟ್ಟಿದ್ದ ರೈತರಿಗೆ ನಿಜವಾದ ವರದಾನವಾಗಿದೆ. ಸಚಿವ ಚಲುವರಾಯಸ್ವಾಮಿ ಅವರ ನಾಯಕತ್ವದಲ್ಲಿ ಮೈಶುಗರ್ ಕಾರ್ಖಾನೆ ತನ್ನೆಲ್ಲಾ ಆರ್ಥಿಕ ಸಂಕಷ್ಟಗಳಿಂದ ಪಾರಾಗಿ ಮತ್ತೆ ಗತವೈಭವಕ್ಕೆ ಮರಳುವ ವಿಶ್ವಾಸ ಮಂಡ್ಯದ ರೈತಾಪಿ ವರ್ಗದಲ್ಲಿ ಇಮ್ಮಡಿಗೊಂಡಿದೆ.
