- ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರಿಂದ ಬುದ್ಧ ದಮ್ಮ ಸಂದೇಶ

ಚಾಮರಾಜನಗರ: ಬುದ್ಧ ವಂದನೆ, ಬುದ್ಧ ಪ್ರತಿಮೆಯ ಆಕರ್ಷಕ ಸ್ತಬ್ಧಚಿತ್ರದ ಮೆರವಣಿಗೆ, ಬುದ್ಧ ಗೀತಗಾಯನದಂತಹ ಸ್ಮರಣೀಯ ಕಾರ್ಯಕ್ರಮಗಳ ಮೂಲಕ ನಗರದಲ್ಲಿ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ 2570ನೇ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಲಾಗಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬೌದ್ಧ ವಿಹಾರ ಅವರಣದಲ್ಲಿ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿ ಬುದ್ಧ ದಮ್ಮ ಸಂದೇಶ ನೀಡಿದರು.
ಮಹಾರಾಜ ಶುದ್ದೋಧನ ಹಾಗೂ ಮಾಯಾವತಿ ದಂಪತಿಗಳ ಪುತ್ರರಾದ ಬುದ್ಧ ತಮ್ಮ ವೈಭವಯುತ ಜೀವನ ತೊರೆದು ಲುಂಬಿನಿವನದ ಬೋಧಿವೃಕ್ಷದ ಕೆಳಗೆ ಧ್ಯಾನಸಕ್ತರಾಗಿ ಕುಳಿತು ಜ್ಞಾನೋದಯ ಹೊಂದಿದರು. ಮಾನವಕುಲದ ಉದ್ಧಾರಕ್ಕಾಗಿ ಮಾನವೀಯ ಮೌಲ್ಯವುಳ್ಳ ವಿಚಾರಧಾರೆಗಳನ್ನು ಇಡೀ ಜಗತ್ತಿಗೆ ಪ್ರಸ್ತುತಪಡಿಸಿದರು. ಆಸೆಯೇ ದುಖಕ್ಕೆ ಕಾರಣ, ಆಸೆಯನ್ನು ಬಿಡಬೇಕು. ಎಲ್ಲಾ ಧರ್ಮಗಳ ಸಾರವು ಒಂದೇ, ಅದೇ ಮಾನವಕುಲದ ಒಳಿತು ಆಗಿದೆ. ಸಕಲ ಜೀವರಾಶಿಗಳನ್ನು ಸಮಾನವಾಗಿ ಕಂಡ ಬೌದ್ಧ ಧರ್ಮದ ಸಾರವನ್ನು ನಾವೆಲ್ಲರೂ ಅರಿಯಬೇಕು. ಎಲ್ಲರೂ ಬುದ್ಧಮಾರ್ಗದಲ್ಲಿ ನಡೆಯಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಬಳಿಕ ಜಿಲ್ಲಾಡಳಿತ ಭವನದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿತವಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಬೋಧಿವೃಕ್ಷಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಅವರು ಆಶಾಂತಿಯಿಂದ ಕೂಡಿರುವ ಇಂದಿನ ಪ್ರಸ್ತುತ ಜಗತ್ತಿನ ನೆಮ್ಮದಿ, ಶಾಂತಿಗೆ ಬುದ್ಧರ ಸಂದೇಶಗಳು, ವಿಚಾರಧಾರೆಗಳು ದಾರಿದೀಪವಾಗಿವೆ. ಅವರ ಅದರ್ಶ ತತ್ವಗಳನ್ನು ಇಡೀ ಸಮಾಜಕ್ಕೆ ಪಸರಿಸಬೇಕಾಗಿದೆ. ಮತ್ತೊಬ್ಬರಿಗೆ ಕೇಡು ಬಯಸದೇ ಒಳಿತು ಬಯಸುವುದೇ ಬೌದ್ಧ ಧರ್ಮದ ಸಾರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ದೇಶದ ಎಲ್ಲಾ ಮಹಾತ್ಮರ ಸಂದೇಶಗಳು ಒಂದೇ ಆಗಿವೆ. ಅದು ಮಾನವ ಕಲ್ಯಾಣ ಮಾತ್ರವೇ ಆಗಿದೆ. ಪ್ರತಿಯೊಬ್ಬರು ಶಾಂತಿ, ನೆಮ್ಮದಿಗಾಗಿ ಬುದ್ಧರ ತತ್ವಾದರ್ಶಗಳನ್ನು ಪ್ರತಿನಿತ್ಯ ಸ್ಮರಿಸಬೇಕಾಗಿದೆ. ಅವರನ್ನು ಆಚರಣೆ ಮಾಡುವುದಲ್ಲ, ಬದಲಾಗಿ ಓದಿ ತಿಳಿಯಬೇಕು ಎಂದು ಹೇಳಿದರು.
ಕಲಬುರ್ಗಿ ಜನಪರ ವೇದಿಕೆಯ ಬೌದ್ಧ ವಿಚಾರವಾದಿಗಳಾದ ಜೀತೇಂದ್ರ ಕೆ. ತಳವಾರ್ ಅವರು ಮುಖ್ಯ ಭಾಷಣ ಮಾಡಿ ನಿನಗೆ ನೀನೆ ಬೆಳಕು ಎಂದು ಇಡೀ ಜಗತ್ತಿಗೆ ಸಾರಿದ ಬುದ್ಧರು ಈ ಜಗದ ಬೆಳಕಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳು ಜಗತ್ತಿಗೆ ಬೆಳಕು ನೀಡಿವೆ. ಅವರುಗಳನ್ನು ಓದಿ ಅರಿತಾಗ ಮಾತ್ರ ಅವರ ಸಂದೇಶಗಳು ಜೀವಂತಿಕೆ ಪಡೆಯಲಿವೆ. ಜಗತ್ತು ಇಂದು ಅಸ್ಥಿರತೆಯಿಂದ ಕೂಡಿದೆ. ಈ ಜಗತ್ತು ಬುದ್ಧನನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಸಾರ್ವಕಾಲಿಕವಾಗಿರುವ ಬುದ್ಧರ ಪಂಚಶೀಲ ತತ್ವಗಳನ್ನು ಈ ಜಗತ್ತು ಅರಿಯಬೇಕು. ಬುದ್ಧರ ಸಂದೇಶಗಳು, ಬಸವಣ್ಣನವರ ವಚನಗಳ ಸಾರವನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಡಕಗೊಳಿಸಿದ್ದಾರೆ. ಅದಕ್ಕಾಗಿ ನಮ್ಮ ಭಾರತ ಸದೃಢ ಪ್ರಜಾಪ್ರಭುತ್ವ ಸುಭದ್ರವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕೊಳ್ಳೇಗಾಲ ತಾಲೂಕು ಚೆನ್ನಲಿಂಗನಹಳ್ಳಿಯ ಜೀತವನ ಬುದ್ಧ ವಿಹಾರದ ಮನೋರಖ್ಖಿತ ಥೇರಾ ಬಂತೇಜಿ ಅವರು ಬುದ್ಧರ ಧ್ಯಾನದ ಮಹತ್ವವನ್ನು ತಿಳಿಸಿ ಆಶೀರ್ವಚನ ನೀಡಿದರು.
ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕರಾದ ರಾಜು, ಭಾರತೀಯ ಬೌದ್ಧ ಮಹಾಸಬಾ ಅಧ್ಯಕ್ಷರಾದ ಬಸವರಾಜು, ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಮಸಮುದ್ರದ ಮಹೇಶ್ ಮತ್ತು ತಂಡದವರು ನಡೆಸಿಕೊಟ್ಟ ಬುದ್ಧ ಗೀತಗಾಯನ ಎಲ್ಲರ ಗಮನ ಸೆಳೆಯಿತು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ 350 ಅಡಿ ಉದ್ದದ ಬುದ್ಧಧ್ವಜ ಪ್ರದರ್ಶನ ವಿಶೇಷವಾಗಿತ್ತು. ಜಿಲ್ಲಾಡಳಿತ ಭವನದ ಮುಂಬಗದಲ್ಲಿರುವ ಸಮವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.