- ಪೌರಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿ : ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ

ಚಾಮರಾಜನಗರ: ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯ, ಸವಲತ್ತುಗಳನ್ನು ನಿಗದಿತ ಕಾಲಮಿತಿಯಲ್ಲಿ ಸಮರ್ಪಕವಾಗಿ ತಲುಪಿಸಲು ಮುಂದಾಗುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ನಗರಸಭಾ ಸಭಾಂಗಣದಲ್ಲಿಂದು ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪೌರಕಾರ್ಮಿಕರ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿ ಬಳಿಕ ಮಾತನಾಡಿದ ಅವರು ಸರ್ಕಾರದ ಮಾರ್ಗಸೂಚಿಗಳನ್ವಯ ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ತಲುಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಆಯೋಗದ ವತಿಯಿಂದ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ತಾಕೀತು ಮಾಡಿದರು.
ಗೃಹಭಾಗ್ಯ ಯೋಜನೆಯಡಿ ಹೊಸದಾಗಿ ನೇಮಕವಾಗಿರುವ ಪೌರಕಾರ್ಮಿಕರಿಗೆ ಸೋಮವಾರಪೇಟೆ ಹಾಗೂ ರಾಮಸಮುದ್ರ ಬಡಾವಣೆಗಳಲ್ಲಿ ನಿವೇಶನಗಳನ್ನು ಹಂಚಲಾಗಿದ್ದು, ಈವರೆಗೂ ಹಕ್ಕುಪತ್ರಗಳನ್ನು ನೀಡಿರುವುದಿಲ್ಲ. ಪೌರಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ರಸ್ತೆ, ಒಳಚರಂಡಿ, ಬೀದಿದೀಪ ಸೇರಿದಂತೆ ಮೂಲಸೌಲಭ್ಯಗಳಿಲ್ಲ. ಕೊಳಚೆ ಮಂಡಳಿಯಿಂದ 92 ಮನೆಗಳು ಮಂಜೂರಾಗಿದ್ದರೂ ಮನೆ ನಿರ್ಮಾಣಕ್ಕೆ ತಡೆಯೊಡ್ಡಲಾಗಿದೆ. ಖಾಯಂ ಪೌರಕಾರ್ಮಿಕರಂತೆ ನೇರ ಪಾವತಿದಾರರಿಗೂ ವೇತನದ ಜತೆಗೆ ಸಂಕಷ್ಟ ಭತ್ಯೆಯನ್ನು ನೀಡಬೇಕು. 2-3 ತಿಂಗಳಿಗೊಮ್ಮೆ ವೇತನ ನೀಡದೆ ಪ್ರತಿತಿಂಗಳು ನೀಡಬೇಕೆಂಬ ಸಮಸ್ಯೆಗಳನ್ನು ಸಭೆಯಲ್ಲಿ ಗಮನಕ್ಕೆ ತರಲಾಯಿತು.
ಸ್ವಚ್ಚತೆಗಾಗಿ ಆರೋಗ್ಯ ಸುರಕ್ಷಾ ಪರಿಕರಗಳನ್ನು ನೀಡಬೇಕು. ಗುರುತಿನ ಚೀಟಿ ನೀಡಬೇಕು. ಪೌರಕಾರ್ಮಿಕರ ಕಲ್ಯಾಣಕ್ಕಾಗಿ ನಗರಸಭೆಯಲ್ಲಿ ಕ್ಷೇಮಾಭಿವೃದ್ಧಿ ನಿಧಿ ಮೀಸಲಿಡಬೇಕು. ವಿಶ್ರಾಂತಿಗೃಹ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ನಿಯಮಿತವಾಗಿ ಸಮವಸ್ತ್ರ ನೀಡುವ ವ್ಯವಸ್ಥೆಯಾಗಬೇಕು. ಇ.ಎಸ್.ಐ ಮತ್ತು ಪಿಎಫ್ ಹಣ ಕೊಡಿಸಬೇಕು. ನಿವೃತ್ತಿ ಹೊಂದಿದ ಪೌರಕಾರ್ಮಿಕರಿಗೆ ನಗರಸಭೆಯಿಂದ ಗೌರವಯುತವಾಗಿ ಬಿಳ್ಕೊಡುಗೆ ನೀಡಬೇಕು. ಖಾಯಂ ಹಾಗೂ ನೇರಪಾವತಿ ಪೌರಕಾರ್ಮಿಕರ ನಡುವೆ ತಾರತಮ್ಯವಿರಬಾರದು ಎಂಬುದು ಸೇರಿದಂತೆ ಇನ್ನಿತರೆ ಅಹವಾಲುಗಳನ್ನು ಪೌರಕಾರ್ಮಿಕರು ನಿವೇದಿಸಿಕೊಂಡರು.
ಸಮಸ್ಯೆಗಳನ್ನು ಆಲಿಸಿದ ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ಮಾತನಾಡಿ ಪ್ರತಿನಿತ್ಯ ನಗರಸ್ವಚ್ಚತೆ ಕಾಯಕ ಮಾಡುವ ಪೌರಕಾರ್ಮಿಕರ ಹಿತ ಕಾಪಾಡಲು ನಗರಸಭೆ ಬದ್ಧವಾಗಿರಬೇಕು. ಪೌರಕಾರ್ಮಿಕರ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ಪ್ರತಿತಿಂಗಳು 5ರೊಳಗೆ ವೇತನ ಪಾವತಿಸಬೇಕು. ಸಮವಸ್ತ್ರ, ಕೈಗ್ಲೌಸ್, ಗಮ್ಬೂಟ್, ಮಾಸ್ಕ್ ಸೇರಿದಂತೆ ಆರೋಗ್ಯ ಸುರಕ್ಷಾ ಪರಿಕರಗಳನ್ನು ಸಮರ್ಪಕವಾಗಿ ಒದಗಿಸಬೇಕು. ಹೊರಗುತ್ತಿಗೆ ನೇಮಕದಲ್ಲಿನ ಮಾನದಂಡಗಳನ್ನು ಏಜೆನ್ಸಿದಾರರು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ಏಜೆನ್ಸಿದಾರರಿಗೆ ನೋಟಿಸ್ ಜಾರಿಗೊಳಿಸಿ ಕಪ್ಪುಪಟ್ಟಿಗೆ ಸೇರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪೌರಕಾರ್ಮಿಕರಿಗೆ ಗುಣಮಟ್ಟದ ಬೆಳಗಿನ ಉಪಹಾರ ನೀಡಬೇಕು. ಗುರುತಿನ ಚೀಟಿ ನೀಡಬೇಕು. ಇ.ಎಸ್.ಐ ಮತ್ತು ಪಿಎಫ್ ಕ್ರಮಬದ್ಧವಾಗಿ ಕಟಾವಣೆಯಾಗಬೇಕು. ಪೌರಕಾರ್ಮಿಕರ ವಿಶ್ವಾಂತಿಗೃಹ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಬೇಕು. ನಗರಸಭಾ ವ್ಯಾಪ್ತಿಯ ಪೌರಕಾರ್ಮಿಕರ ಕುಂದುಕೊರತೆ ಪರಿಹಾರ ಸಂಬಂಧ 15 ದಿನದೊಳಗೆ ಆಯೋಗಕ್ಕೆ ಅಧಿಕಾರಿಗಳು ವರದಿ ಸಲ್ಲಿಸಬೇಕು. ಪೌರಕಾರ್ಮಿಕರು ಯಾವುದೇ ದೂರು, ಸಮಸ್ಯೆಗಳಿದ್ದರೂ ಆಯೋಗಕ್ಕೆ ನೇರವಾಗಿ ಅಥವಾ ಲಿಖಿತವಾಗಿ ದೂರು ನೀಡಬಹುದು. ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಲಿದೆ ಎಂದು ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ತಿಳಿಸಿದರು.
ಇದೇ ವೇಳೆ ನಗರಸಭೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ನಗರಸಭೆ ಪೌರಾಯುಕ್ತರಾದ ಪರಶುರಾಮ ಎಂ ಛಲವಾದಿ, ಪರಿಸರ ವಿಭಾಗದ ಎಂಜಿನಿಯರ್ ರೂಪ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮೇಘ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಇತರರು ಉಪಸ್ಥಿತರಿದ್ದರು.