ಚಾಮರಾಜನಗರ: ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ತಪ್ಪಿಸಲು ಬೇಸಿಗೆ ಶಿಬಿರಗಳು ಸಹಕಾರಿ ಎಂದು ಸಂತೆಮರಹಳ್ಳಿ ಇನ್ಸ್ ಪೆಕ್ಟರ್ ಮೋಹನ್ ಕುಮಾರ್ ಹೇಳಿದರು.
ತಾಲೂಕಿನ ಸಂತೇಮರಹಳ್ಳಿಯಲ್ಲಿ ಡಿ. ಎಂ. ಚಾರಿಟಬಲ್ ಟ್ರಸ್ಟ್ ಮಕ್ಕಳಿಗಾಗಿ ಏರ್ಪಡಿಸಿದ್ದ
ವಿವಿಧ ಕೌಶಲ್ಯ ಕಲಿಸುವ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉರಗ ತಜ್ಞ ಮಹೇಶ್ ಮಾತನಾಡಿ, ಹಾವುಗಳ ಬಗ್ಗೆ ಭಯಪಡುವುದಕ್ಕಿಂತ ಅರಿವು ಪಡೆಯುವುದು ಅನಿವಾರ್ಯ ಎಂದರು.
ನಮ್ಮ ಮನೆಯ ಸುತ್ತಮುತ್ತ ಅಶುಚಿತ್ವ ಇರುವುದರಿಂದ ಅನೇಕ ವಿಷ ಜಂತುಗಳು ಹೆಚ್ಚುತ್ತವೆ .ಇದನ್ನು ತಡೆಯಬೇಕಾದರೆ ಸ್ವಚ್ಛತೆ ಕಾಪಾಡಬೇಕು. ಜೊತೆಗೆ ಅವುಗಳ ಅಪಾಯದ ಬಗ್ಗೆ ಹಾಗೆಯೇ ಅವುಗಳ ಸಂರಕ್ಷಣೆ ಬಗ್ಗೆ ನಮ್ಮಲ್ಲಿ ಅರಿವು ಇರಬೇಕು. ಈ ನಿಟ್ಟಿನಲ್ಲಿ ಡಿಎಂ ಚಾರಿಟಬಲ್ ಟ್ರಸ್ಟ್ ನಡೆಸುತ್ತಿರುವ ಬೇಸಿಗೆ ಶಿಬಿರ ಇದಕ್ಕೂ ಉಪಯುಕ್ತವಾಗಿದೆ ಎಂದರು.
ಉದ್ಯಮಿ ನಾಗೇಶ್ ಮಾತನಾಡಿ, ಡಿ.ಎಂ.ಚಾರಿಟಬಲ್ ಟ್ರಸ್ಟ್ ಕಳೆದ 8 ವರ್ಷಗಳಿಂದ ನಡೆಸುತ್ತಿರುವ ಕೌಶಲ್ಯ ತರಬೇತಿ ಚಟುವಟಿಕೆಗಳಿಂದ ನೂರಾರು ಜನರಿಗೆ ಉದ್ಯೋಗ ಸಿಗುವಂತಾಗುತ್ತಿದೆ. ಇಂಥ ಸಂಸ್ಥೆಗಳು ಜಿಲ್ಲೆಯಲ್ಲಿ ಇನ್ನೂ ಹೆಚ್ಚಾಗಬೇಕು ಎಂದರು.
ಮುಖಂಡರಾದ ಎಂ. ರಾಜು ಮಾತನಾಡಿ, ಡಿ. ಎಮ್. ಚಾರಿಟಬಲ್ ಟ್ರಸ್ಟ್ ಭವಿಷ್ಯದಲ್ಲಿ ಕೈಗೊಳ್ಳುವ ಅನೇಕ ಕಾರ್ಯಕ್ರಮಗಳನ್ನು ವಿವರಿಸಿದರು. ಟ್ರಸ್ಟ್ ನ ನಿರ್ವಾಹಕರಾದ ಪರಮೇಶ್, ಮಧುಶ್ರೀ, ನೇತ್ರಾವತಿ, ಕುಮಾರಿ, ಸುಮತಿ, ಸಿದ್ದರಾಜು, ಪ್ರೀತಮ್ ಇತರರು ಭಾಗವಹಿಸಿದ್ದರು.