- ಕೇಂದ್ರ ಶಿಕ್ಷಣ ಸಚಿವ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ಶ್ರೀನಿವಾಸಗೌಡ ಆಗ್ರಹ
ಚಾಮರಾಜನಗರ: ವೈದ್ಯಕೀಯ ವಿದ್ಯಾಭ್ಯಾಸದ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸುವ ನೀಟ್ ಪರೀಕ್ಷೆಗಳನ್ನು ಆಯಾಯ ರಾಜ್ಯ ಸರ್ಕಾರಗಳೇ ನಡೆಸಲು ಆದೇಶ ನೀಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರ ಮುಖಾಂತರ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಾರಿಯ ವೈದ್ಯಕೀಯ ವಿದ್ಯಾಭ್ಯಾಸದ ಪ್ರವೇಶಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಾಶವಾಗಿದೆ ಮತ್ತು ಈ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅರ್ಹ ವಿದ್ಯಾರ್ಥಿಗಳು ಬಹಳ ಜನ ಆತ್ಮಹತ್ಯೆಯನ್ನು ಸಹ ಮಾಡಿಕೊಂಡಿರುತ್ತಾರೆ. ಇದು ಅತ್ಯಂತ ಖಂಡನೀಯವಾದದು. ಕೇಂದ್ರ ಸರ್ಕಾರ ಇದರ ಬಗ್ಗೆ ತೀವ್ರವಾಗಿ ನಿಗಾವಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳಬೇಕು. ಮತ್ತು ಮುಂದೆ ಇಂತಹ ಅನಾಹುತಗಳು ನಡೆಯದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಕೇಂದ್ರ ಸರ್ಕಾರ ವಹಿಸಬೇಕು. ಮತ್ತು ಇಂತಹ ಒಂದು ಅನಾಹುತ ನಡೆದಿರುವ ಹಿನ್ನಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರು ಇದರ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆಯನ್ನು ನೀಡಬೇಕಾಗಿ ಮತ್ತು ಇದರ ಜೊತೆಗೆ ಇನ್ನು ಮುಂದೆ ಕೇಂದ್ರ ಸರ್ಕಾರ ಈ ವೈದ್ಯಕೀಯ ವಿದ್ಯಾಭ್ಯಾಸದ ಪರೀಕ್ಷೆಗಳನ್ನು ಇನ್ನು ಮುಂದೆ ಆಯಾಯ ರಾಜ್ಯ ಸರ್ಕಾರಗಳಿಗೆ ನಡೆಸುವಂತೆ ಆದೇಶ ನೀಡಬೇಕಾಗಿದೆ. ಈ ಹಿಂದೆ ಈ ನೀಟ್ ಪರೀಕ್ಷೆಗಳನ್ನು ಆಯಾ ರಾಜ್ಯ ಸರ್ಕಾರಗಳೇ ನಡೆಸುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ನೀಟ್ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಆದರೆ ಇದು ಇಡೀ ದೇಶಾದ್ಯಂತ ಈ ನೀಟ್ ಪರೀಕ್ಷೆಗಳು ಅವ್ಯವಸ್ಥೆಯಿಂದ ಕೂಡಿದ್ದು ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಮರಣ ಶಾಸನವಾಗಿದೆ. ಆದ್ದರಿಂದ ಈ ತಕ್ಷಣ ತಾವು ಮುಂದಿನ ವರ್ಷದಿಂದ ಈ ನೀಟ್ ಪರೀಕ್ಷೆಗಳನ್ನು ಆಯಾಯ ರಾಜ್ಯ ಸರ್ಕಾರಗಳೇ ನಡೆಸುವಂತೆ ಅನುಮತಿ ನೀಡುವಂತೆ ಪ್ರಧಾನಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಡಿಸಿ ಜವರೇಗೌಡ, ಪಣ್ಯದಹುಂಡಿ ರಾಜು, ಹೊಮ್ಮ ಲೋಕೇಶ್,ಅರುಣ್ ಕುಮಾರ್ ಗೌಡ, ರವಿಚಂದ್ರಪ್ರಸಾದ್ ಕಹಲೆ, ರಾಜಪ್ಪ, ಶಿವು, ಇತರರು ಹಾಜರಿದ್ದರು,