ವಿಕಸಿತ ಭಾರತ ಯುವ ನಾಯಕ ಸಂವಾದ ಅಭಿಯಾನದಡಿ ಜಿಲ್ಲೆಯಲ್ಲಿ ಹೆಚ್ಚಿನ ಯುವಜನರ ನೊಂದಣಿ – ಶಲೋಮ್ ಪಿಲಿಪ್ ಥಾಮಸ್

ಚಾಮರಾಜನಗರ: ವಿಕಸಿತ ಭಾರತ ಯುವ ನಾಯಕ ಸಂವಾದ ಅಭಿಯಾನವು ಜಿಲ್ಲೆಯ ಯುವಜನರು ತಮ್ಮ ಆಲೋಚನೆಗಳನ್ನು ಸ್ವತಂತ್ರವಾಗಿ ಪ್ರಸ್ತುತಪಡಿಸಿ ಪ್ರತಿಭೆ ಪ್ರದರ್ಶಿಸಲು ನೆರವಾಗಲಿದ್ದು, ಅಭಿಯಾನದಡಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಚ್ಚಿನ ಯುವಜನರು ನೊಂದಣಿ ಮಾಡಿಕೊಳ್ಳುವಂತೆ ಮೈಭಾರತ್ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಶಲೋಮ್ ಪಿಲಿಪ್ ಥಾಮಸ್ ಅವರು ಹೇಳಿದರು.

   ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 

   ವಿಕಸಿತ ಭಾರತ ಯುವ ನಾಯಕ ಸಂವಾದವು ಭಾರತ ಸರ್ಕಾರದ ರಾಷ್ಟ್ರೀಯ ಯುವಜನೋತ್ಸವದ ಒಂದು ಭಾಗವಾಗಿದೆ. ಇಡೀ ದೇಶಾದ್ಯಂತ 15ರಿಂದ 29ರ ವಯೋಮಾನದ ಯುವಜನರನ್ನು ಒಟ್ಟುಗೂಡಿಸಿ ತಮ್ಮ ಆಲೋಚನೆ, ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ಹಾಗೂ ವಿಕಸಿತ ಭಾರತ್-2047ರ ದೃಷ್ಟಿಕೋನದ ಬಗ್ಗೆ ನೀತಿ ನಿರೂಪಕರು ಹಾಗೂ ದೇಶದ ಪ್ರಧಾಮಂತ್ರಿಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಅವಕಾಶ ಕಲ್ಪಿಸಲಿದೆ. ಇದಕ್ಕಾಗಿ ಆನ್‍ಲೈನ್ ಮೂಲಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಯುವಜನರು ಯಾವುದೇ ಸ್ಥಳದಲ್ಲಿದ್ದರೂ ನೇರವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಈ ಅವಕಾಶವನ್ನು ಜಿಲ್ಲೆಯ ಯುವಕ, ಯುವತಿಯರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

   ವಿಕಸಿತ ಭಾರತದ ಸವಾಲುಗಳು ಹಾಗೂ ಪ್ರಾದೇಶಿಕ ಅಭಿವೃದ್ಧಿ ವಿಷಯಗಳ ಕುರಿತ ತಂತ್ರಜ್ಞಾನ, ನಾವೀನ್ಯತೆ ಮತ್ತು ಭವಿಷ್ಯದ ಸನ್ನದ್ಧತೆ ಬಗ್ಗೆ ರಸಪ್ರಶ್ನೆ ಹಾಗೂ ಪ್ರಬಂಧಸ್ಫರ್ಧೆ, ಸಾಂಸ್ಕøತಿಕ ವಿಭಾಗದಲ್ಲಿ ಜಾನಪದ ಗೀತೆ, ನೃತ್ಯ, ಚಿತ್ರಕಲೆ, ವಾಗ್ಮೀತಾ ಸ್ಪರ್ಧೆ, ಕವನ ರಚನೆ, ರಾಷ್ಟ್ರೀಯ ಯುವ ವಿನ್ಯಾಸ, ಯುವ ಉದ್ಯಮಿಗಳಿಗೆ ಎದುರಾಗುವ ಸವಾಲು, ಯುವ ಸಂಸತ್ತು ಸೇರಿದಂತೆ ಆರು ಬಗೆಯ ಸ್ಪರ್ಧೆಗಳಲ್ಲಿ ಯುವಜನರು ಭಾಗವಹಿಸಬಹುದಾಗಿದೆ. ಕಳೆದ ಬಾರಿ ನಡೆದ ವಿಕಸಿತ ಭಾರತ ಯುವ ನಾಯಕ ಸಂವಾದದಲ್ಲಿ ದೇಶಾದ್ಯಂತ 50 ಲಕ್ಷಕ್ಕೂ ಹೆಚ್ಚಿನ ಯುವಜನರು ರಸಪ್ರಶ್ನೆಯಲ್ಲಿ ಭಾಗವಹಿಸಿ ಅರ್ಹತಾ ಆಧಾರಿತ ಪ್ರಕ್ರಿಯೆಯ ಮೂಲಕ 3 ಸಾವಿರ ಮಂದಿ ಯುವಜನರು ರಾಷ್ಟ್ರೀಯ ಸಂವಾದಕ್ಕೆ ಆಯ್ಕೆಯಾಗಿದ್ದರು. ಅಭಿಯಾನವು ಇದನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು. 

   ರಸಪ್ರಶ್ನೆ ಸ್ಪರ್ಧೆಯು ಆಗಸ್ಟ್ 17ರಿಂದ ಸೆಪ್ಟೆಂಬರ್ 30ರವರೆಗೆ ಹಾಗೂ ಪ್ರಬಂಧ ಸ್ಪರ್ಧೆ ಅಕ್ಟೋಬರ್ 5ರಿಂದ 19ರವರೆಗೆ ಆನ್‍ಲೈನ್ ಮೂಲಕ ನಡೆಯಲಿವೆ. ಜಿಲ್ಲಾಮಟ್ಟದ ಸ್ಪರ್ಧೆಗಳು ನವೆಂಬರ್ 10ರಿಂದ 16ರವರೆಗೆ ನಡೆಯಲಿದ್ದು, ಅಗ್ರ ಪ್ರಬಂಧಗಳನ್ನು ಪಿಪಿಟಿ ಮೂಲಕ ಪ್ರಸ್ತುತಪಡಿಸಬೇಕು. ಪ್ರತಿ ಜಿಲ್ಲೆಯಿಂದ ಇಬ್ಬರು ರಾಜ್ಯಮಟ್ಟದ ಸಂವಾದಕ್ಕೆ ಆಯ್ಕೆಯಾಗಲಿದ್ದಾರೆ. ನವೆಂಬರ್ 17ರಿಂದ ಡಿಸೆಂಬರ್ 7ರವರೆಗೆ ರಾಜ್ಯಮಟ್ಟದ ತಂಡ ರಚನೆಯಾಗಲಿದೆ. ಅಂತಿಮ ಸ್ಪರ್ಧಿಗಳು ಅಂದರೆ ರಾಜ್ಯಮಟ್ಟದಲ್ಲಿ ರಚನೆಯಾದ ತಂಡವು 2027ರ ಜನವರಿ 10ರಿಂದ 12ರವರೆಗೆ ನವದೆಹಲಿಯಲ್ಲಿ ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ಪ್ರಸ್ತುತಿ ನೀಡಬೇಕಾಗುತ್ತದೆ ಎಂದರು.

   ಸಾಂಸ್ಕøತಿಕ ವಿಭಾಗದ ಸ್ಪರ್ಧೆಗಳಿಗಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಮಾಹೆಯಲ್ಲಿ ಚಾಮರಾಜನಗರದಲ್ಲಿ ಜಿಲ್ಲಾಮಟ್ಟದ ಸಾಂಸ್ಕøತಿಕ ಉತ್ಸವ ಆಯೋಜಿಸಲಾಗುತ್ತದೆ. ಈ ಸಾಂಸ್ಕøತಿಕ ಉತ್ಸವ ಜಾನಪದ ಗೀತೆ, ನೃತ್ಯ, ಚಿತ್ರಕಲೆ, ವಾಗ್ಮೀತಾ ಸ್ಪರ್ಧೆ, ಕವನ ರಚನೆಗಾಗಿ ಸ್ಪರ್ಧೆಗಳು ನಡೆಯಲಿವೆ. ಪ್ರತಿವಿಭಾಗದ ವಿಜೇತರು ರಾಜ್ಯಮಟ್ಟದ ಸುತ್ತಿಗೆ ಮುನ್ನೆಡೆಯಲಿದ್ದಾರೆ. mಥಿbhಚಿಡಿಚಿಣ.gov.iಟಿ ಗೆ ಭೇಟಿ ನೀಡಿ ನೊಂದಣಿ ನಮೂನೆಯನ್ನು ಭರ್ತಿಮಾಡಿ ಸಲ್ಲಿಸಬೇಕು. ಸೆಪ್ಟೆಂಬರ್ 30ರೊಳಗೆ ವಿಕಸಿತ ಭಾರತ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಮೈ ಭಾರತ್ ಕೇಂದ್ರದ ಕೊಠಡಿ ಸಂಖ್ಯೆ 223 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಯುವಜನ ಅಧಿಕಾರಿ ಶಲೋಮ್ ಪಿಲಿಪ್ ಥಾಮಸ್ ಹೇಳಿದರು.

   ಇದೇ ವೇಳೆ ವಿಕಸಿತ ಭಾರತ ಯುವ ನಾಯಕ ಸಂವಾದ-2026ರ ಅಭಿಯಾನ ಕುರಿತ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಮೈ ಭಾರತ್ ಕೇಂದ್ರದ ಪ್ರತಿನಿಧಿ ಸಹನಾ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *