ಜುಲೈ 28ರಂದು ನಗರದಲ್ಲಿ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ : ಅಗತ್ಯ ಸಿದ್ದತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಸೂಚನೆ

ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವವು ಜುಲೈ 28ರಂದು ಜರುಗಲಿದ್ದು, ರಥೋತ್ಸವ, ಜಾತ್ರಾ ಮಹೋತ್ಸವದ ಸುಗಮ ನಿರ್ವಹಣೆಗಾಗಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಸೂಚನೆ ನೀಡಿದರು.

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಾಮರಾಜನಗರದ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾ ರಥೋತ್ಸವ ಹಾಗೂ ಜಾತ್ರಾ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಆಷಾಢಮಾಸದಲ್ಲಿ ಇಡೀ ರಾಜ್ಯದಲ್ಲಿಯೇ ನಡೆಯುವ ಏಕೈಕ ರಥೋತ್ಸವ ಇದಾಗಿದ್ದು, ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದೆ. ಭಕ್ತಾಧಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯಾವುದೇ ಕೊರತೆಯಾಗದಂತೆ ಅಗತ್ಯ ಸಿದ್ದತಾ ಕಾರ್ಯಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

  ಚಾಮರಾಜೇಶ್ವರಸ್ವಾಮಿ ಮಹಾ ರಥೋತ್ಸವವು ಜುಲೈ 28ರಂದು ಬೆಳಿಗ್ಗೆ 11.30 ಗಂಟೆಗೆ ಆರಂಭವಾಗಲಿದೆ. ಮಹಾರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಜುಲೈ 21ರಿಂದ ಆಗಸ್ಟ್ 1ರವರೆಗೂ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ರಥೋತ್ಸವದ ಪೂಜೆ ಆಚರಣೆ, ಪರಂಪರೆ ಹಾಗೂ ಸಂಪ್ರದಾಯಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಜಾತ್ರಾ ಮಹೋತ್ಸವದ ಅಚ್ಚುಕಟ್ಟು ಆಯೋಜನೆಯಲ್ಲಿ ಲೋಪಗಳಾಗಬಾರದು. ಕಳೆದ ಬಾರಿಯಂತೆ ಈ ಬಾರಿಯೂ ಮಹಾರಥೋತ್ಸವ ಯಶಸ್ಸಿಗೆ ಮುಂದಾಗುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

  ರಥೋತ್ಸವದ ಸಮಯದಲ್ಲಿ ರಥದ ಸುತ್ತಲು ಜನಜಂಗುಳಿಯಾಗದಂತೆ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಪೂಜೆಗೆ ಅನುವು ಮಾಡಿಕೊಡಬೇಕು. ಉತ್ಸವಮೂರ್ತಿ ಮೆರವಣಿಗೆ ಹಾಗೂ ದೇವಾಲಯದ ಸುತ್ತಲು ರಥ ಸಾಗುವಾಗ ಹೆಚ್ಚಿನ ಜನದಟ್ಟಣೆ ನಿಯಂತ್ರಿಸಬೇಕು. ನಿಗದಿತ ಸ್ಥಳದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಅನ್ನು ಪೊಲೀಸ್ ಇಲಾಖೆಯಿಂದ ಮಾಡಬೇಕು. ನಗಸಭೆಯಿಂದ ರಥೋತ್ಸವದಂದು ಭಕ್ತಾಧಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಬೇಕು. ರಥದಬೀದಿ ತಳಿರು-ತೋರಣಗಳಿಂದ ಅಲಂಕೃತಗೊಳ್ಳಬೇಕು. ರಥದ ಹಾದಿಯಲ್ಲಿ ಮರಳು ಹಾಕಿ ರಥೋತ್ಸವ ಪೂರ್ಣಗೊಂಡ ಬಳಿಕ ಮರಳನ್ನು ತೆಗೆಯಬೇಕು. ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದರು.

  ಅರಣ್ಯ ಇಲಾಖೆಯು ರಥ ಸಂಚರಿಸುವ ಮಾರ್ಗದಲ್ಲಿ ರಥೋತ್ಸವಕ್ಕೆ ಅಡಚಣೆಯಾಗುವ ಮರದ ಕೊಂಬೆಗಳನ್ನು ತೆರವುಗೊಳಿಸಬೇಕು. ಚೆಸ್ಕಾಂ ವತಿಯಿಂದ ರಥೋತ್ಸವದ ಪೂಜಾ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನಿರಂತರ ವಿದ್ಯುತ್ ಪೂರೈಸಬೇಕು. ರಥ ಸಾಗುವ ಮಾರ್ಗದಲ್ಲಿ ಹಾದುಹೋಗಿರುವ ವಿದ್ಯುತ್ ಹೈಟೆಂನ್ಷನ್ ವೈರ್‍ಗಳು ಹಾಗೂ ಕೇಬಲ್ ವೈರ್‍ಗಳನ್ನು ತೆರವುಗೊಳಿಸಬೇಕು. ಅಬಕಾರಿ ಇಲಾಖೆಯು ರಥೋತ್ಸವ ದಿನದಂದು ಮದ್ಯ ಮಾರಾಟ ನಿಷೇಧಿಸಬೇಕು. ಯಾವುದೇ ಅಗ್ನಿ ಅವಘಡಗಳು ಸಂಭವಿಸಿದಂತೆ ಅಗ್ನಿಶಾಮಕ ಇಲಾಖೆ ಎಚ್ಚರ ವಹಿಸಬೇಕು. ಲೋಕೋಪಯೋಗಿ ಇಲಾಖೆಯು ರಥೋತ್ಸವಕ್ಕೆ ರಥದ ಫಿಟ್ನೆಸ್ ಪ್ರಮಾಣ ಪತ್ರ ಸಲ್ಲಿಸಬೇಕು. ಆರೋಗ್ಯ ಇಲಾಖೆಯು ಪ್ರಥಮ ಚಿಕಿತ್ಸೆ ಸೇರಿದಂತೆ ಆರೋಗ್ಯ ಸೇವೆಗಳಿಗಾಗಿ ಆಂಬುಲೆನ್ಸ್‍ಗಳನ್ನು ಸನ್ನದ್ಧವಾಗಿಡುವಂತೆ ಸೂಚಿಸಿದರು.

  ಭಕ್ತಾಧಿಗಳ ಆರೋಗ್ಯ ಹಿತದೃಷ್ಠಿಯಿಂದ ಪ್ರಸಾದ ವಿನಿಯೋಗ ಸೇರಿದಂತೆ ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಿ ಶುದ್ಧ ಕುಡಿಯುವ ನೀರಿನ್ನು ಪೂರೈಸಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರಥೋತ್ಸವಕ್ಕಾಗಿ ನಾದಸ್ವರದೊಂದಿಗೆ ಆಕರ್ಷಕ ಕಲಾತಂಡಗಳನ್ನು ನಿಯೋಜಿಸÀಬೇಕು. ರಥೋತ್ಸವ ಸೂಸೂತ್ರ ನಿರ್ವಹಣೆಗಾಗಿ ಸಂಬಂಧಪಟ್ಟ ತಾಲೂಕು ಆಡಳಿತ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಆ ಮೂಲಕ ರಥೋತ್ಸವ ಯಶಸ್ವಿಗೆ ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ  ಅವರು ತಿಳಿಸಿದರು. 

  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ತಹಶೀಲ್ದಾರ್ ಬಿ. ಗಿರಿಜಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು, ಚಾಮರಾಜೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ್, ಅರ್ಚಕರಾದ ರಾಮಕೃಷ್ಣ ಭಾರಧ್ವಜ್, ಮುಖಂಡರಾದ ವೆಂಕಟ ನಾಗಪ್ಪಶೆಟ್ಟಿ, ಚಾ.ರಂ. ಶ್ರೀನಿವಾಸಗೌಡ, ಮಹೇಶ್ ಕುದರ್, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *