ಹನೂರಿನಲ್ಲಿ ಕೆ.ಎಸ್.ಆರ್.ಟಿ.ಸಿ.ನೂತನ ಬಸ್ ಘಟಕ ನಿರ್ಮಾಣಕ್ಕೆ ಸಚಿವ ಸಿ.ಪುಟ್ಟರಂಗಶೆಟ್ಟಿ ಶಂಕುಸ್ಥಾಪನೆ

ಚಾಮರಾಜನಗರ: ಹನೂರು ತಾಲೂಕು ಕೇಂದ್ರದಲ್ಲಿ ಕೆ.ಎಸ್.ಆರ್.ಟಿ.ಸಿ ಯ ನೂತನ ಬಸ್ ಘಟಕ ನಿರ್ಮಾಣ ಕಾರ್ಯಕ್ಕೆ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹನೂರು ಭಾಗದಲ್ಲಿ ಸುಸಜ್ಜಿತ ಬಸ್ ಘಟಕ ನಿರ್ಮಾಣವಾದ ನಂತರ ಗ್ರಾಮೀಣ ಹಾಗೂ ಕಾಡಂಚಿನ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಸಂಚಾರ ಕಲ್ಪಿಸಲು ಸಾರಿಗೆ ನಿಗಮಕ್ಕೆ ಅನುಕೂಲವಾಗಲಿದೆ ಎಂದರು.

ಸ್ಥಳೀಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

“ಹೊಸ ಘಟಕದಲ್ಲಿ ವಾಹನ ದುರಸ್ತಿ ಅಂಕಣ, ವಾಷಿಂಗ್ ರ್ಯಾಂಪ್ ಮತ್ತು ಇಂಧನ ತುಂಬಿಸುವ ಟ್ಯಾಂಕ್ ವ್ಯವಸ್ಥೆ ಇರುವುದರಿಂದ ಬಸ್‌ಗಳ ನಿರ್ವಹಣೆ ಇಲ್ಲೇ ಆಗುತ್ತದೆ. ಇದರಿಂದ ಬಸ್ ರದ್ದಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದರು.

ಶಾಸಕ ಎಂ. ಆರ್. ಮಂಜುನಾಥ್ ಮಾತನಾಡಿ , ಹನೂರು ತಾಲೂಕಿನ ಜನರ ಬಹುದಿನದ ಕನಸು ಇಂದು ನನಸಾಗಿದೆ. ಈ ಘಟಕದಿಂದ 170ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಸಿಗಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಮತ್ತು ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ” ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗದ ವತಿಯಿಂದ ಕಸಬಾ ಹೋಬಳಿಯ ಮಂಗಲ ಗ್ರಾಮದ ಸರ್ವೇ ಸಂಖ್ಯೆ 430/A1A ಮತ್ತು ಲೊಕ್ಕನಹಳ್ಳಿ ಹೋಬಳಿಯ ಕಣ್ಣೂರು ಗ್ರಾಮದ ಸರ್ವೇ ಸಂಖ್ಯೆ 1/B1 ವ್ಯಾಪ್ತಿಯ ಒಟ್ಟು 4 ಎಕರೆ 50 ಸೆಂಟ್ಸ್ ಜಾಗದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ವಿಶಾಲವಾದ ಬಸ್ ಘಟಕ ನಿರ್ಮಾಣವಾಗಲಿದೆ.

ಮಳೆಗಾಲದ ಅವಧಿಯನ್ನು ಹೊರತುಪಡಿಸಿ 12 ತಿಂಗಳೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಆರ್. ನರೇಂದ್ರ, ಜಿಲ್ಲಾಧಿಕಾರಿ ಶ್ರೀ ರೂಪ,ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಡಿಪೊ ವ್ಯವಸ್ಥಾಪಕ ಬೋಗ ನಾಯಕ ಇತರರು ಇದ್ದರು.

Leave a Reply

Your email address will not be published. Required fields are marked *